ಬೆಳಗಾವಿ: ‘ಚುನಾವಣೆ ಎಂದಾಕ್ಷಣ ಟಿಕೆಟ್ ಕೇಳುವವರು ಪಕ್ಷದಲ್ಲಿ ಬಹಳಷ್ಟು ಮಂದಿ ಇರುತ್ತಾರೆ. ಆದರೆ ಪಕ್ಷ ತೀರ್ಮಾನಿಸಿದ ಮೇಲೆ ನಡೆದುಕೊಳ್ಳುವ ಶಿಸ್ತು ನಮ್ಮಲ್ಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಕೂಡ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ, ಅಪಸ್ವರ ಇಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಾರ್ಚ್ 30ರಂದು ನಾಮಪತ್ರ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮುಖ ಕಾರ್ಯಕರ್ತರು ಬಂದಿರುತ್ತಾರೆ. ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಾತನಾಡಬಹುದು. ಕೋವಿಡ್–19 ಮಾರ್ಗಸೂಚಿಗಳನ್ನು ಕಾರ್ಯಕರ್ತರು ಪಾಲಿಸಬೇಕು. ಮೆರವಣಿಗೆ ಇರುವುದಿಲ್ಲ’ ಎಂದು ತಿಳಿಸಿದರು.
‘ಬೆಲೆ ಏರಿಕೆ ಹಿಂದಿನ ಸರ್ಕಾರಗಳಿದ್ದಾಗಲೂ ಇತ್ತು. ಏರಿಕೆ–ಇಳಿಕೆ ಇರುತ್ತದೆ. ಏರಿಕೆ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಕ್ರಮ ವಹಿಸುತ್ತಾರೆ. ಒಳ್ಳೆಯ ಸರ್ಕಾರ ನಮ್ಮದಾಗಿದೆ. ಆಡಳಿತ ವಿರೋಧಿ ಅಲೆ ಇಲ್ಲ. ಪಕ್ಷದ ಅಭ್ಯರ್ಥಿ ಪರವಾದ ವರದಿ ಇದೆ. ನಕಾರಾತ್ಮಕ ವರದಿ ಇಲ್ಲ. ದಿವಂಗತ ಸುರೇಶ ಅಂಗಡಿ ಅವರು ಮಾಡಿದ್ದಂತಹ ಕೆಲಸಗಳು ಜನರ ಮನಸ್ಸಿನಲ್ಲಿವೆ. ರೈಲ್ವೆ ಸಚಿವರಾಗಿ ಹಲವು ಯೋಜನೆಗಳನ್ನು ಅವರು ತಂದಿದ್ದರು. ಜನರೊಂದಿಗೆ ಇದ್ದರು. ಅದೆಲ್ಲವೂ ಉಪ ಚುನಾವಣೆಯಲ್ಲಿ ಅನುಕೂಲ ಆಗಲಿದೆ. ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.