
ಬೈಲಹೊಂಗಲ: ‘ಕನ್ನಡ ಭಾಷೆಯನ್ನು ನಿತ್ಯ ಬಳಸಿದರೆ ಮಾತ್ರ ಉಳಿಸಿ, ಬೆಳೆಸಲು ಸಾಧ್ಯ. ನಿತ್ಯ ಮನೆಯಲ್ಲಿ ಕನ್ನಡ ಭಾಷೆ ಮಾತನಾಡಬೇಕು’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಹೇಳಿದರು.
ತಾಲ್ಲೂಕಿನ ನೇಗಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ನಡೆದ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡದ ಇತಿಹಾಸ ಪುಟಗಳು ಜಗತ್ತಿಗೆ ಮಾದರಿಯಾಗಿವೆ. ಕವಿಗಳು, ರಾಜರು, ಲೇಖಕರು, ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಸಾಹಿತ್ಯದ ಕುರಿತು ಇಂದು ಹೆಚ್ಚಿನ ಚಿಂತೆನಗಳು ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಪಾಲಕರು ಟಿವಿ ಮುಂದೆ ಕುಳಿತು ಧಾರಾವಾಹಿ ನೋಡದೇ ಮಕ್ಕಳಿಗೆ ಕನ್ನಡ ಓದುವ ಹವ್ಯಾಸ, ಸಂಸ್ಕೃತಿ ಬೆಳೆಸಿ, ಕನ್ನಡ ಪುಸ್ತಕೋದ್ಯಮಕ್ಕೆ ಉತ್ತೇಜನ ನೀಡಬೇಕು’ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷೆ ರೋಹಿಣಿ ಪಾಟೀಲ ಆಶಯ ನುಡಿ ಹೇಳಿದರು.
ಬೈಲೂರು ನಿಜಗುಣಾನಂದ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನೇಗಿನಹಾಳ ಅದ್ವೈತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ತಹಶೀಲ್ದಾರ್ ಎಚ್.ಎನ್. ಶಿರಹಟ್ಟಿ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಜಾನಪದ ಕಲಾವಿದ ಸಿ.ಕೆ. ಮೆಕ್ಕೇದ, ಕನ್ನಡಪರ ಹೋರಾಟಗಾರ ಮಹಾಂತೇಶ ತುರಮರಿ, ಕೃಷ್ಣಾಜಿ ಕುಲಕರ್ಣಿ, ಮಡಿವಾಳಪ್ಪ ಕುಲ್ಲೊಳ್ಳಿ, ಮಹಾರುದ್ರಪ್ಪ ನಂದೆನ್ನವರ ಇದ್ದರು. ಎನ್.ಆರ್. ಠಕ್ಕಾಯಿ ಸ್ವಾಗತಿಸಿದರು. ಸಂತೋಷ ಪಾಟೀಲ, ಅನ್ವರ ದೇವರದವರ ಕಾರ್ಯರಮ ನಿರೂಪಿಸಿದರು. ಮಂಜುನಾಥ ಮಡಿವಾಳರ ಪ್ರಾರ್ಥಿಸಿದರು. ಕುಮಾರ ಕಡೆಮನಿ ನಾಡಗೀತೆ ಹಾಡಿದರು.
‘ಅಸಹಾಯಕರಿಗೆ ಸಾಹಿತ್ಯದಿಂದ ಸಾಂತ್ವನ ಲಭಿಸಲಿ’
‘ಸಮೂಹ ಮಾಧ್ಯಮಗಳು ಭಾಷಾ ಬೆಳವಣಿಗೆಯಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾಷಾ ಶುದ್ಧತೆ ವಸ್ತುನಿಷ್ಠ ಸಮಾಚಾರಕ್ಕೆ ಹೆಚ್ಚು ಗಮನ ಹರಿಸಬೇಕು. ಭಾಷೆ ಸಾಹಿತ್ಯ ತಾಲ್ಲೂಕಿನ ಪ್ರಗತಿಯ ಅವಲೋಕನ ನಡೆಯಬೇಕು. ಬದುಕಿನಲ್ಲಿ ಸೋತ ಅಸಹಾಯಕರಿಗೆ ಸಾಹಿತ್ಯದಿಂದ ಸಾಂತ್ವನ ಸಿಗುವಂತಾಗಬೇಕು’ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಎಸ್.ಕೌಜಲಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.