ತೆಲಸಂಗ: ‘ಗಡಿ ನಾಡಿನಲ್ಲಿ ಕನ್ನಡ ಭಾಷೆ ಉಳಿಸುವುದು ಮತ್ತು ಅಭಿಮಾನ ಮೂಡಿಸುವುದು ಕೇವಲ ಭಾಷಣಗಳಿಂದ ಸಾಧ್ಯವಾಗದು. ವರ್ಷವಿಡೀ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗಡಿ ಭಾಗದ ಜನರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಸರ್ಕಾರದಿಂದ ನಡೆಯಬೇಕು’ ಎಂದು ಗಡಿ ನಾಡು ಕನ್ನಡ ಬಳಗದ ಅಧ್ಯಕ್ಷ ಗುರುರಾಜ ಕುಂಬಾರ ಹೇಳಿದರು.
ಇಲ್ಲಿನ ಸಿದ್ದರಾಮೆಶ್ವರ ಮಠದಲ್ಲಿ ಗಡಿನಾಡು ಕನ್ನಡ ಬಳಗ ಮತ್ತು ಪಂ.ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ಬೆಳೆಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು’ ಎಂದರು.
ನಾಟಕಕಾರ ಅಮೋಘ ಖೊಬ್ರಿ ಮಾತನಾಡಿ, ‘ಗಡಿ ಗ್ರಾಮಗಳ ಅಭಿವೃದ್ಧಿ ಬಹಳಷ್ಟು ಕುಂಠಿತಗೊಂಡಿದೆ. ಕನ್ನಡಪರ ಚಟುವಟಿಕೆಗಳು ನಡೆಯುತ್ತಿಲ್ಲ. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ 42 ಗಡಿ ಗ್ರಾಮಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ. ಆ ಗ್ರಾಮಗಳಲ್ಲಿ ಕನ್ನಡದ ಅಳಿವು ಉಳಿವು ಅಲ್ಲಿ ಕನ್ನಡಪರ ಚಟುವಟಿಕೆ ಹಮ್ಮಿಕೊಳ್ಳುವುದು ಮತ್ತು ಅಭಿವೃದ್ಧಿ ಮೇಲೆ ನಿಂತಿದೆ. ಸಂಬಂಧಿಸಿದ ಪ್ರಾಧಿಕಾರಗಳು ಇತ್ತ ಹೆಚ್ಚು ಒತ್ತು ಕೊಡಬೇಕು’ ಎಂದು ಒತ್ತಾಯಿಸಿದರು.
ಸಂಘಟಕರಾದ ಡಾ.ಬಿ.ಎಸ್. ಕಾಮನ್, ಬಿ.ಎಚ್. ಶೆಲ್ಲೆಪ್ಪಗೋಳ, ಡಾ.ಎಸ್.ಐ. ಇಂಚಗೇರಿ, ಸಿದ್ದು ಕೋಡ್ನಿ, ಮಹಾದೇವ ಸಕ್ರಿ, ಸುರೇಶ ಸನಗೊಂಡ, ಗಪೂರ ಮುಲ್ಲಾ, ಅಪ್ಪು ಜಮಾದರ, ಇಮ್ತಿಯಾಜ್ ಮುಜಾವರ, ವಿಜಯ ಪತ್ತಾರ, ಜಗದೀಶ ಮಠದ, ಅಮಸಿದ್ದ ಟೋಪಣಗೋಳ, ರಾವಸಾಬ ಮೆಣಸಂಗಿ, ರಾಜು ಕಲಾಲ, ರಾಜು ಸಾಗರ, ಸಂಜು ಮೋರೆ, ಹಣಮಂತ ಥೈಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.