ADVERTISEMENT

ಬೆಳಗಾವಿ | ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 3:08 IST
Last Updated 21 ನವೆಂಬರ್ 2021, 3:08 IST
ಬೆಳಗಾವಿ ಜಿಲ್ಲೆಯ ಮೂಡಲಗಿ ತಹಶೀಲ್ದಾರ್ ಕಚೇರಿಯಲ್ಲಿ ಕಸಾಪ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ
ಬೆಳಗಾವಿ ಜಿಲ್ಲೆಯ ಮೂಡಲಗಿ ತಹಶೀಲ್ದಾರ್ ಕಚೇರಿಯಲ್ಲಿ ಕಸಾಪ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ   

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಗೆ‌ ಜಿಲ್ಲೆಯಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಮತದಾನ ಆರಂಭವಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ‌ ಕಂಡುಬಂದಿದೆ. ಬೈಲಹೊಂಗಲದ ಮಂಗಲಾ ಮೆಟಗುಡ್ಡ ಪುನರಾಯ್ಕೆ ಬಯಸಿದ್ದಾರೆ. ಕನ್ನಡಪರ ಹೋರಾಟಗಾರ ಗೋಕಾಕದ ಬಸವರಾಜ‌ ಖಾನಪ್ಪನವರ ಹಾಗೂ ಬೆಳಗಾವಿಯ ವಕೀಲ ರವೀಂದ್ರ ತೋಟಿಗೇರ ಕಣದಲ್ಲಿದ್ದಾರೆ. ಗೋಕಾಕದ ಸುರೇಶ ಬಸಲಿಂಗಪ್ಪ ಮರಲಿಂಗಣ್ಣವರ ಕಣದಿಂದ ಹಿಂದೆ ಸರಿದಿದ್ದು, ಮಂಗಲಾ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಎಲ್ಲ ತಹಶೀಲ್ದಾರರ ಕಚೇರಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹಾಗೂ ರಾಮದುರ್ಗ ತಾಲ್ಲೂಕಿನ ಚಂದರಗಿಯ ನಾಡಕಚೇರಿಗಳಲ್ಲಿ ಸೇರಿದಂತೆ ಒಟ್ಟು 21 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 12,716 ಪುರುಷರು ಹಾಗೂ 3,171 ಮಹಿಳೆಯರು ‌ಸೇರಿದಂತೆ 15,887 ಮತದಾರರಿದ್ದಾರೆ.

ADVERTISEMENT

ಸಂಜೆ 4ರವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಮಾಡಲಾಗುವುದು. ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ಫಲಿತಾಂಶ ರಾತ್ರಿ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ. ಪ್ರತಿ ಮತಗಟ್ಟೆಗೆ ನಾಲ್ವರು ಸಿಬ್ಬಂದಿ ನಿಯೋಜಿಸಲಾಗಿದೆ. ಅವರೇ ಮತ ಎಣಿಕೆ ಕಾರ್ಯದಲ್ಲೂ ಭಾಗವಹಿಸಲಿದ್ದಾರೆ ಎಂದು ಚುನಾವಣಾಧಿಕಾರಿ ಆರ್‌.ಕೆ. ಕುಲಕರ್ಣಿ ‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.