ADVERTISEMENT

ಕರ್ನಾಟಕ ಹೊಸ ನಕಾಶೆ ಹರಿಬಿಟ್ಟ ‘ಮಹಾ’ ಕನ್ನಡಿಗರು

ಮಹಾರಾಷ್ಟ್ರದ ಗರ್ವಭಂಗಕ್ಕೆ ಆನ್‌ಲೈನ್‌ ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:31 IST
Last Updated 26 ನವೆಂಬರ್ 2022, 19:31 IST
ಮಹಾರಾಷ್ಟ್ರ ಐದು ಜಿಲ್ಲೆಗಳನ್ನು ಸೇರಿಸಿ ಅಲ್ಲಿನ ಕನ್ನಡಿಗರು ಸಿದ್ಧಪಡಿಸಿದ ಕರ್ನಾಟಕದ ಹೊಸ ನಕಾಶೆ
ಮಹಾರಾಷ್ಟ್ರ ಐದು ಜಿಲ್ಲೆಗಳನ್ನು ಸೇರಿಸಿ ಅಲ್ಲಿನ ಕನ್ನಡಿಗರು ಸಿದ್ಧಪಡಿಸಿದ ಕರ್ನಾಟಕದ ಹೊಸ ನಕಾಶೆ   

ಬೆಳಗಾವಿ: ಕೊಲ್ಹಾಪುರ, ಸಾಂಗಲಿ, ಸೊಲ್ಲಾಪುರ, ಜತ್ತ, ಉಸ್ಮನಾಬಾದ್‌, ಲಾತೂರ್‌ ಪ್ರದೇಶಗಳನ್ನು ಒಳಗೊಂಡಂತೆ ಕರ್ನಾಟಕದ ಹೊಸ ನಕಾಶೆ ಸಿದ್ಧಪಡಿಸಿದ ಅಲ್ಲಿನ ಕನ್ನಡಿಗರು, ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಭಿಯಾನ ಆರಂಭಿಸಿದ್ದಾರೆ.

ಮರಾಠಿಗರ ‘ಝಾಲಾಚ್‌ ಪಾಹಿಜೆ (ಆಗಲೇ ಬೇಕು)’ ಘೋಷಣೆಗೆ ಪ್ರತ್ಯುತ್ತರವಾಗಿ ಕನ್ನಡಿಗರೂ ಈ ಅಭಿಯಾನ ಆರಂಭಿಸಿ, ತಿರುಗೇಟು ನೀಡಿದ್ದಾರೆ. ಹೊಸ ನಕಾಶೆ ಹರಿಬಿಟ್ಟು ‘ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ’ ಎಂದು ಗಟ್ಟಿ ಕೂಗು ಹಾಕಿದ್ದಾರೆ.

ಬೆಳಗಾವಿ, ಬೀದರ್‌, ಭಾಲ್ಕಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಆರು ದಶಕಗಳಿಂದ ಎಂಇಎಸ್‌, ಶಿವಸೇನೆ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ. ಇದಕ್ಕೆ ಸೆಡ್ಡು ಹೊಡೆದ ಅಲ್ಲಿನ ಕನ್ನಡಿಗರು ಕೂಡ, ಮಹಾರಾಷ್ಟ್ರದ ಐದು ಪ್ರಮುಖ ಜಿಲ್ಲೆಗಳಲ್ಲಿ ಕನ್ನಡಿಗರಿದ್ದು ಅವುಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಅಭಿಯಾನ ಆರಂಭಿಸಿದ್ದಾರೆ.

ADVERTISEMENT

ಶನಿವಾರ ಇಡೀ ದಿನ ಈ ನಕಾಶೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡಿತು. ಕನ್ನಡಿಗರೇ ಹೆಚ್ಚಾಗಿರುವ ಜತ್ತ ತಾಲ್ಲೂಕು ಕರ್ನಾಟಕದಲ್ಲಿ ಸೇರ್ಪಡೆ ಮಾಡುವಂತೆ ಅಲ್ಲಿನ ಕನ್ನಡಿಗರು ಒತ್ತಾಯಿಸಿದ್ದಾರೆ.

ಉದ್ಧವ್‌ ಠಾಕ್ರೆ ಆರೋಪ

ಮುಂಬೈ: ‘ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದವನ್ನು ಕೆದಕಿದ್ದಾರೆ’ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.

ಗಡಿ ವಿವಾದ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಅವಮಾನಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆ ಕುರಿತು ಶಿಂದೆ ಮೌನವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.