ಖಾನಾಪುರ: ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿ ಸ್ತ್ರೀಯರೇ ಇದ್ದಾರೆ.
ಎಲ್ಲ ರಂಗಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಾಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಸಾರ್ವಜನಿಕ ಸೇವೆ, ನ್ಯಾಯಾಂಗದ ಪ್ರಮುಖ ಸ್ಥಾನದಲ್ಲಿ ಮಹಿಳೆಯರೇ ಇರುವುದು ವಿಶೇಷ. ಇಲ್ಲಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ನಾರಿಯರು ಅಧಿಕಾರ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲು ಎನ್ನಬಹುದಾಗಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಅಂಜಲಿ ನಿಂಬಾಳ್ಕರ ಜಯ ಗಳಿಸುವ ಮೂಲಕ ತಾಲ್ಲೂಕಿನ ಪ್ರಥಮ ಶಾಸಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ತಾಲ್ಲೂಕಿನ ಜಾಂಬೋಟಿ ಗ್ರಾಮದ ಧನಶ್ರೀ ದೇಸಾಯಿ ಬಿಜೆಪಿ ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯೆಯಾಗಿದ್ದಾರೆ. ತಹಶೀಲ್ದಾರ್ ಆಗಿ ರೇಷ್ಮಾ ತಾಳಿಕೋಟಿ, ಸ್ಥಳೀಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕೆ.ವಿದ್ಯಾ, ತಾಲ್ಲೂಕಿನ ಕಣಕುಂಬಿ ವಲಯದ ಆರ್.ಎಫ್.ಒ. ಆಗಿ ಕವಿತಾ ಈರನಟ್ಟಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಪರ್ವೀನ್ ಶೇಖ್, ಹೆಸ್ಕಾಂ ಖಾನಾಪುರ ಉಪ ವಲಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಲ್ಪನಾ ತಿರವೀರ, ನಂದಗಡ ಪೊಲೀಸ್ ಠಾಣೆಯ ಪಿ.ಎಸ್.ಐ. ಸುಮನಾ ನಾಯ್ಕ್, ಪಟ್ಟಣ ಪಂಚಾಯ್ತಿ ಸಮುದಾಯ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ವೇರಣೆಕರ ಸಾರ್ವಜನಿಕ ಸೇವೆಯಲ್ಲಿರುವ ಪ್ರಮುಖ ಅಧಿಕಾರಿಗಳಾಗಿದ್ದಾರೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಂದಾ ಕೊಡಚವಾಡಕರ ಮತ್ತು ಉಪಾಧ್ಯಕ್ಷೆ ಶ್ವೇತಾ ಮಜಗಾವಿ ಸೇರಿದಂತೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸ್ಥಾನದಲ್ಲೂ ಮಹಿಳೆಯರೇ ಇದ್ದು, ಜನಪರ ಆಡಳಿತ ನಡೆಸುತ್ತಿದ್ದಾರೆ. ತಾಲ್ಲೂಕಿನ ಚಾಪಗಾವಿಯ ಐಶ್ವರ್ಯಾ ದಳವಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದಾರೆ. ಕುಸ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.