ADVERTISEMENT

ಕೋವಿಡ್ ನೆಗೆಟಿವ್ ಬಂದರೆ ಎಸ್‌ಐಟಿ ಎದುರು ರಮೇಶ ಹಾಜರಾಗುತ್ತಾರೆ: ಬಾಲಚಂದ್ರ

ಸಿ.ಡಿ. ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 14:51 IST
Last Updated 17 ಏಪ್ರಿಲ್ 2021, 14:51 IST
ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ    

ಬೆಳಗಾವಿ: ‘ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯವರು ಶಾಸಕ, ಸಹೋದರ ರಮೇಶ ಜಾರಕಿಹೊಳಿ ಅವರಿಗೆ ನೀಡಿರುವ ನೋಟಿಸ್ ಅನ್ನು ನಾನೇ ಸ್ವೀಕರಿಸಿದ್ದೇನೆ. ರಮೇಶ ಹೋಂ ಕ್ವಾರಂಟೈನ್ ಇದ್ದಾರೆ. ಮನೆಯಲ್ಲಿ ವಾರದವರೆಗೆ ಪ್ರತ್ಯೇಕವಾಗಿ ಇರುವಂತೆ ವೈದ್ಯರು ಸಲಹೆ ನೀಡಿದ್ದರು. ಆ ಅವಧಿ ಏ.20ರಂದು ಮುಗಿಯಲಿದೆ. ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ನೆಗೆಟಿವ್ ವರದಿ ಬಂದರೆ ಏ. 20ರಂದು ಎಸ್‌ಐಟಿ ಎದುರು ಖಂಡಿತವಾಗಿಯೂ ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗೋಕಾಕದಲ್ಲಿ ಮತ ಚಲಾಯಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುವುದಾಗಿ ರಮೇಶ ಹೇಳಿದ್ದಾರೆ’ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಚಾರ ನಡೆಸಿದ್ದರು. ಗೆಲ್ಲಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು ಮಾಡಿದ್ದಾರೆ. ಹೀಗಾಗಿ, ಮಂಗಲಾ ಅಂಗಡಿ ಗೆಲ್ಲುವ ವಿಶ್ವಾಸವಿದೆ’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿ ಅಭ್ಯರ್ಥಿ ಮಂಗಲಾ ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಇಬ್ಬರೂ ಗೋಕಾಕದವರು. ಹೀಗಾಗಿ, ಈ ಭಾಗದಲ್ಲಿ ಗೊಂದಲ ಇತ್ತು. ನಮ್ಮವರು ಎಂಬ ಪ್ರೀತಿ ಜನರಲ್ಲಿತ್ತು. ಅದನ್ನು ಹೋಗಲಾಡಿಸಿದೆವು. ಬಿಜೆಪಿ ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟೆವು. ಗೊಂದಲ ನಿವಾರಿಸಿದೆವು. ಅಭಿವೃದ್ಧಿಗಾಗಿ ಬೆಂಬಲಿಸಿ ಎಂದು ಕೋರಿದ್ದೆವು’ ಎಂದು ಪ್ರತಿಕ್ರಿಯಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.