ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಳಗಾವಿ: ‘ವೀರಶೈವ ಲಿಂಗಾಯತ ಜಾತಿಗಳ ನಡುವೆ ಕ್ರೈಸ್ತರನ್ನು ಸಮೀಕರಿಸುವ ಹುನ್ನಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರದ ಉದ್ದೇಶಿತ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸುತ್ತಿರುವುದನ್ನು ಮಹಾಸಭೆ ಖಂಡಿಸುತ್ತದೆ’ ಎಂದು ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆಗೆ ಒಳಪಡಲಿರುವ ಸಾವಿರಕ್ಕೂ ಮಿಕ್ಕ ಜಾತಿ / ಉಪಜಾತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಜಾತಿಗಳ ಪಟ್ಟಿಯಲ್ಲಿ ಅನಧಿಕೃತವಾಗಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತ ಜಾತಿಗಳೆಂದು ಗುರುತಿಸಿರುವುದು ಅಕ್ಷಮ್ಯ’ ಎಂದು ಕಿಡಿ ಕಾರಿದರು.
‘ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತರನ್ನಾಗಿಸುವ ಹುನ್ನಾರ ಸಲ್ಲದು. ನಮ್ಮ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಇದರ ಹಿಂದೆ ಇದೆ. ಸಮಾಜವನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಆಡಗಿದೆ. ನಮ್ಮನ್ನು ಕ್ರೈಸ್ತ ಹೆಸರಿನಲ್ಲಿ ಮತಾಂತರಿಗಳು ನಮ್ಮ ಜಾತಿಗಳೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ’ ಎಂದೂ ಆರೋಪಿಸಿದರು.
ಮಹಾಸಭೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಬಿ.ಜೀರಳಿ, ವಧು ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ.ಮಾನ್ವಿ, ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ, ಚಂದ್ರಶೇಖರ ಬೆಂಬಳಗಿ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಉಮೇಶ ಬಾಳಿ, ಗಿರೀಶ ಕತ್ತಿಶೆಟ್ಟಿ, ವೀಣಾ ನಾಗಮೋತಿ, ಜ್ಯೋತಿ ಭಾವಿಕಟ್ಟಿ, ಅಂಜನಾ ಕಿತ್ತೂರ, ಸರೋಜಿ ನಿಶಾನದಾರ, ಪ್ರಸಾದ ಹಿರೇಮಠ, ಮಹಾಂತೇಶ ಪಾಟೀಲ, ಅಣ್ಣಾಸಾಹೇಬ ಕೊರಬು, ಎಸ್.ಎಂ.ದೊಡಮನಿ, ವಿ.ಕೆ.ಪಾಟೀಲ, ಆರ್.ಪಿ.ಪಾಟೀಲ, ಬಾಲಚಂದ್ರ ಬಾಗಿ, ವಿದ್ಯಾ ಸವದಿ ಮೊದಲಾದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.