ADVERTISEMENT

ಎಂಇಎಸ್‌ನಿಂದ ‘ಹುತಾತ್ಮರ‌’ ದಿನ: ಮಹಾರಾಷ್ಟ್ರ ಸಚಿವ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 12:11 IST
Last Updated 17 ಜನವರಿ 2020, 12:11 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ಹುತಾತ್ಮರ ದಿನ’ ಕಾರ್ಯಕ್ರಮಕ್ಕೆ ಮುನ್ನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ಹುತಾತ್ಮರ ದಿನ’ ಕಾರ್ಯಕ್ರಮಕ್ಕೆ ಮುನ್ನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದರು   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಇಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹುತಾತ್ಮರ ದಿನ’ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇಬಜಾರ್ ಠಾಣೆ ಪೊಲೀಸರು ವಶಕ್ಕೆ ಪಡೆದು, ಅವರ ರಾಜ್ಯದ ಗಡಿಗೆ ಬಿಟ್ಟು ಬಂದರು.

ಮಹಾರಾಷ್ಟ್ರದ ಮುಖಂಡರು ಬರುವ ಮುನ್ಸೂಚನೆಯಿಂದಾಗಿ, ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಹುತಾತ್ಮ ವೃತ್ತ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ನಡುವೆ, ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ರಾಜೇಂದ್ರ ಪಾಟೀಲ ಪೊಲೀಸರ ಕಣ್ತಪ್ಪಿಸಿ ಇಲ್ಲಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಅವರನ್ನು ವಶಕ್ಕೆ ಪಡೆಯುವ ವೇಳೆ ಎಂಇಎಸ್ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಗಡಿಭಾಗದಲ್ಲಿ ಆ ರಾಜ್ಯದ ನಾಯಕರ ಕ್ಯಾತೆ ಹೆಚ್ಚಾಗಿದೆ. ಪ್ರಚೋದನಕಾರಿ ಹೇಳಿಕೆಗಳಿಂದ ಗಡಿ ಭಾಗದಲ್ಲಿ ಶಾಂತಿ ಕದಡುತ್ತಿದೆ. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಪೊಲೀಸರು ನಿಗಾ ವಹಿಸಿದ್ದಾರೆ.

ADVERTISEMENT

ಇತ್ತ, ಬೆಳಿಗ್ಗೆ ಹುತಾತ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಇಎಸ್‌ನ ಮುಖಂಡರಾದ ಕಿರಣ ಠಾಕೂರ, ದೀಪಕ ದಳವಿ, ಮಾಲೋಜಿರಾವ ಅಷ್ಠೇಕರ ಮೊದಲಾದ ಮುಖಂಡರು ವೇದಿಕೆ ಹಂಚಿಕೊಂಡಿದ್ದು ಗಮನಸೆಳೆಯಿತು.

ಕಿರಣ ಠಾಕೂರ ಮಾತನಾಡಿ, ‘ಗಡಿ ವಿವಾದದಲ್ಲಿ ಪ್ರಾಣ ತೆತ್ತ 9 ಹುತಾತ್ಮರ ಬಲಿದಾನ ವ್ಯರ್ಥವಾಗಬಾರದು. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರವಿದ್ದು, ಎನ್.ಸಿ.ಪಿ.ಯೂ ಪಾಲುದಾರನಾಗಿದೆ. ಎರಡೂ ಪಕ್ಷಗಳ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ ಮೊದಲಿನಿಂದಲೂ ಗಡಿ ವಿವಾದದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂದೆ ವಿಳಂಬ ಸಲ್ಲದು. ತ್ವರಿತವಾಗಿ ಬಗೆಹರಿಯಬೇಕು’ ಎಂದರು.

‘ವಿವಾದ ಲೋಕಸಭೆಯಲ್ಲಿ ಬಗೆಹರಿಯದೆ ಇರುವುದರಿಂದಾಗಿ, 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈಗಲೂ ಲೋಕಸಭೆಯಲ್ಲಿ ವಿವಾದ ಬಗೆಹರಿಸಬಹುದು. ಮಹಾರಾಷ್ಟ್ರದ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ನ್ಯಾಯಾಲಯದಲ್ಲಿದೆ ಎನ್ನುವ ನೆಪ ಹೇಳಿಕೊಂಡು ಇನ್ನೆಷ್ಟು ವರ್ಷಗಳು ಕಾಯುವುದು? ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬೇಕಾದರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಆಗ ಕರ್ನಾಟಕ ಪೊಲೀಸರ ಆಟ ನಡೆಯುವುದಿಲ್ಲ’ ಎಂದರು.

ಮುಖಂಡ ಮಾಲೋಜಿರಾವ ಅಷ್ಟೇಕರ, ‘ಮಹಾರಾಷ್ಟ್ರದ ನಾಯಕರ ಮೇಲೆ ಒತ್ತಡ ಹಾಕಲು ಎಂಇಎಸ್ ಮುಖಂಡರು ಹೀಗೆಯೇ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು. ಮೆರವಣಿಗೆ ನಡೆಸಿ, ಗಡಿ ಭಾಗದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದರು.

ಇಲ್ಲಿನ ಕನ್ನಡ ಹೋರಾಟಗಾರರ ವಿರೋಧದ ನಡುವೆಯೂ ಕಾರ್ಯಕ್ರಮ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.