ADVERTISEMENT

ಹುಬ್ಬಳ್ಳಿ | ಮಲಪ್ರಭಾ ಕಾರ್ಖಾನೆ: ಶೇ 49.45 ಮತದಾನ

ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ ಪ್ರವೇಶದಿಂದ ರಂಗು ಪಡೆದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:34 IST
Last Updated 29 ಸೆಪ್ಟೆಂಬರ್ 2025, 4:34 IST
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು   

ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಶೇ 49.45ರಷ್ಟು ಮತದಾನವಾಗಿದೆ. ಒಟ್ಟು 16,903 ಮತಗಳ ಪೈಕಿ 8,359 ಮತದಾರರು ಮತ ಚಲಾಯಿಸಿದರು. ಒಂದಷ್ಟು ವಾಗ್ವಾದಗಳನ್ನು ಹೊರತುಪಡಿಸಿ, ಚುನಾವಣೆ ಶಾಂತ ರೀತಿಯಿಂದ ನೆರವೇರಿತು. ಈಗೇನಿದ್ದರೂ ಫಲಿತಾಂಶದ ಕಡೆ ಮಾತ್ರ ಎಲ್ಲರ ದೃಷ್ಟಿ ನಟ್ಟಿದೆ.

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 5.30ಕ್ಕೆ ಪೂರ್ಣಗೊಂಡಿತು. ಕೇಂದ್ರದ ಬಳಿ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಅಡಚಣೆಯಾಗದೇ ಸುವ್ಯವಸ್ಥಿತ ಕಾರ್ಯ ನಡೆಯಿತು.

ವಾಹನಗಳ ಮೂಲಕ ತಂಡೋಪ ತಂಡವಾಗಿ ಆಗಮಿಸಿದ ರೈತ ಮತದಾರರು ಸರತಿಯಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರವೇಶದಿಂದಾಗಿ ಕಾರ್ಖಾನೆಯ ಚುನಾವಣೆ ಹೆಚ್ಚು ರಂಗು ಪಡೆಯಿತು. ವಿರೋಧಿ ಗುಂಪಿನಲ್ಲಿರುವ, ಹಲವು ವರ್ಷಗಳಿಂದ ಕಾರ್ಖಾನೆಯ ಏಳು– ಬೀಳುಗಳಿಗೆ ಸಾಕ್ಷಿಯಾದ ಹಲವು ಘಟಾನುಘಟಿ ಮುಖಂಡರೂ ಒಂದೇ ಕಡೆ ಕಾಣಿಸಿಕೊಂಡರು.

ADVERTISEMENT

15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 44 ಜನ ಅಭ್ಯರ್ಥಿಗಳು ಸ್ಫರ್ಧೆಗಿಳಿದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೆಕರ್ ಮಾರ್ಗದರ್ಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ‘ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ’ ಪ್ಯಾನಲ್‌, ಕಾರ್ಖಾನೆ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ನಾಸೀರ್ ಬಾಗವಾನ ನೇತೃತ್ವದ ‘ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ’ ಪ್ಯಾನಲ್‌ ಹಾಗೂ ರೈತ ಸಂಘದ ಮುಖಂಡ ಬಸವರಾಜ ಮೋಕಾಶಿ ನೇತೃತ್ವದ ‘ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ’ ಪ್ಯಾನಲ್‌ ಸ್ಫರ್ಧೆಯಲ್ಲಿವೆ.

ವೃದ್ಧರು ಮತ್ತು ಅಂಗವಿಕಲರಿಗಾಗಿ ಚುನಾವಣಾ ಕೇಂದ್ರದ ಮುಖ್ಯಧ್ವಾರದಿಂದ ಮತಗಟ್ಟೆಗಳ ಬಳಿಗೆ ತೆರಳಲು ಕಾರ್ಖಾನೆ ವಾಹನ ಸೌಲಭ್ಯ ಒದಗಿಸಿತ್ತು. ಒಟ್ಟು 34 ಮತಗಟ್ಟೆಗಳನ್ನು ಸ್ಥಾಪಿಸಿ, ನೂರಾರು ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿತ್ತು. ಸಿಬ್ಬಂದಿ ಮೂಲಕ ಮತದಾನಕ್ಕೆ ಬಂದ ಮತದಾರರಿಗೆ ಅವರ ಷೇರು ಸಂಖ್ಯೆ ಹುಡುಕಿಕೊಡಲು ನೆರವಾದರು.

ಈ ಬಾರಿ ಎಲ್ಲ ಷೇರುದಾರ ಮತದಾರರಿಗೆ ಮತದಾನದ ಹಕ್ಕು ನೀಡಿದ್ದರಿಂದ ಮತದಾನದ ಪ್ರಮಾಣ ಈ ಬಾರಿ ಹೆಚ್ಚಾಯಿತು. ಘಟಾನುಘಟಿಗಳ ಸ್ಪರ್ಧೆ, ಮುಂದಾಳತ್ವವು ಈ ಬಾರಿಯ ಮತದಾನ ಹೆಚ್ಚಳಕ್ಕೆ ಪ್ರಮುಖ ಕಾರಣವಾಯಿತು. 

ಚುನಾವಣಾಧಿಕಾರಿಗಳಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಬೀಗಿ ಪೊಲೀಸ್ ಬಂದೋಬಸ್ತ್ ಒದಗಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತದಾನ ಮಾಡಿದರು
ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ
‘ಸಹಕಾರ ಕಾರ್ಖಾನೆ ಖಾಸಗೀಕರಣ ಮಾಡುವುದು ದೂರದ ಮಾತು. ನಾವು ಇಲ್ಲಿ ಬಂದಿರುವುದು ಇದರ ಪುನಃಶ್ಚೇತನ ಮಾಡಲು’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು ‘ನಮಗೆ ಎರಡು ಖಾಸಗಿ ಸಕ್ಕರೆ ಕಾರ್ಖಾನೆ ಇವೆ. ರೈತರ ಆಶಾಕಿರಣ ಆಗಬೇಕು ಎನ್ನುವ ಭಾವನೆಯಿಂದ ಇಲ್ಲಿಗೆ ಬಂದಿದ್ದೇವೆ. ನಮಗೆ ಜನರು ಆಶೀರ್ವಾದ ಮಾಡಿದರೆ ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದರು. ‘ನಾನು ಈ ತಾಲ್ಲೂಕಿನ ಮಗಳು. ನಮ್ಮ ದೊಡ್ಡಪ್ಪ ನಿರ್ದೇಶಕ ನಮ್ಮ ಮಾವನವರಾದ ಗುರುಸಿದ್ದಪ್ಪ ಹೆಬ್ಬಾಳಕರ ಸಂಸ್ಥಾಪಕ ನಿರ್ದೇಶಕ ಆಗಿದ್ದರು. ಕಿತ್ತೂರು ಬೈಲಹೊಂಗಲ ಖಾನಾಪುರ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಷೇರುದಾರರಿದ್ದಾರೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಖಾಸಗೀಕರಣ ಮಾಡುವ ಹುನ್ನಾರ’
ಮತದಾನ ಆರಂಭವಾದ ಕೆಲ ಹೊತ್ತಿನಲ್ಲಿ ಸ್ಥಳಕ್ಕಾಗಮಿಸಿದ ಸಚಿವೆ ಲಕ್ಚ್ಮೀ ಹೆಬ್ಬಾಳಕರ ಚನ್ನರಾಜ ಹಟ್ಟಿಹೊಳಿ ತಮ್ಮ ಪ್ಯಾನಲ್‌ ಬೆಂಬಲಿಸುವಂತೆ ಮತಕೇಂದ್ರದ ಪ್ರವೇಶದ ದ್ವಾರದ ಬಳಿನಿಂತು ರೈತರಿಗೆ ಮನವಿ ಮಾಡುತ್ತಿದ್ದರು. ಆಗ ಸ್ಥಳದಲ್ಲಿ ರೈತ ಸಂಘದ ಪ್ಯಾನಲ್‌ ಅಭ್ಯರ್ಥಿ ಆನಂದ ಹುಚ್ಚಗೌಡ್ರ ಅವರು. ‘ಇದು ರೈತರು ಕಟ್ಟಿದ ಕಾರ್ಖಾನೆ. ಇದನ್ನು ಉಳಿಸಿರಿ. ರಾಜಕೀಯ ವ್ಯಕ್ತಿಗಳಿಗೆ ಮತ ಹಾಕಬೇಡಿ. ಈಗ ಕೈ ಮುಗಿಯುತ್ತಾರೆ ನಂತರ ಕಾರ್ಖಾನೆ ಖಾಸಗೀಕರಣ ಮಾಡುತ್ತಾರೆ. ನೋಡಿಕೊಂಡ ಮತದಾನ ಮಾಡಿ’ ಎಂದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಎರಡೂ ಕಡೆಯ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಚನ್ನರಾಜ ಅವರು ಲಕ್ಷ್ಮೀ ಅವರನ್ನು ಸ್ಥಳದಿಂದ ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.