ADVERTISEMENT

ಮೋದಿ, ಬೊಮ್ಮಾಯಿಯಿಂದಾಗಿ ಬೆಲೆ ಏರಿಕೆ ನಿಯಂತ್ರಣ: ನಿರಾಣಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 11:31 IST
Last Updated 6 ಏಪ್ರಿಲ್ 2022, 11:31 IST
   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಾಗಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ಬೇರೆ ಪಕ್ಷದವರು ಆಡಳಿತದಲ್ಲಿದ್ದಿದ್ದರೆ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್ ದರ ಈವರೆಗೆ ತಲಾ ₹200 ಆಗಿರುತ್ತಿತ್ತು’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸಮರ್ಥಿಸಿಕೊಂಡರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ದೇಶವನ್ನು ಆತ್ಮನಿರ್ಭರ (ಸ್ವಾವಲಂಬಿ) ಮಾಡಬೇಕೆಂದು ಎಥೆನಾಲ್‌ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಪ್ರಧಾನಿ ಗಮನಹರಿಸುತ್ತಿದ್ದಾರೆ. ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲದಿರುವುದರಿಂದ, ಸರ್ಕಾರದ ವಿರುದ್ಧ ಅನವಶ್ಯವಾಗಿ ಆಪಾದನೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಜನರಿಗೆ ತೊಂದರೆ ಆಗುವಂತಹ ಸ್ಥಳಗಳಲ್ಲಿ ಹಿಂದೂಗಳಾಗಲಿ ಅಥವಾ ಯಾರೇ ಆಗಲಿ ಜೋರಾಗಿ ಶಬ್ದ ಬರುವಂತಹ ಕಾರ್ಯಕ್ರಮಗಳನ್ನು ನಡೆಸುವುದು ಸರಿಯಲ್ಲ. ಅಲ್ಲಿ ನ್ಯಾಯಾಲಯದ ಆದೇಶ ಪಾಲಿಸಬೇಕು. ಎಲ್ಲಿ ಜನರಿಗೆ ತೊಂದರೆ ಆಗುವುದಿಲ್ಲವೋ ಅಲ್ಲಿ ನ್ಯಾಯಾಲಯವೇ ಅವಕಾಶ ಕೊಟ್ಟಿದೆ’ ಎಂದು ಪ್ರತಿಕ್ರಿಯಿಸಿದರು.

‘ಸಚಿವ ಹಾಗೂ ಶಾಸಕ ಸ್ಥಾನ ನನ್ನ ತಾತನ ಆಸ್ತಿಯಲ್ಲ. ಸಚಿವನಿರಲಿ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿರಲಿ, ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.