ADVERTISEMENT

ಮುನಿಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಶಾಸಕ ಅಭಯ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 7:31 IST
Last Updated 9 ಜುಲೈ 2023, 7:31 IST
   

ಬೆಳಗಾವಿ: ‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿಗಳು ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡುವ ಮೂಲಕ ಜೈನ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಅನುಮಾನ ಮೂಡಿಸುವಂತಿದ್ದು, ಸಿಬಿಐ ಮೂಲಕ ಪಾರದರ್ಶಕವಾಗಿ ತನಿಖೆ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ’ ಎಂದರು.

‘ಮುನಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾದ ಒಬ್ಬ ಆರೋಪಿ ಹೆಸರು ಬಹಿರಂಗಪಡಿಸಲಾಗಿದೆ. ಇನ್ನೊಬ್ಬ ಆರೋಪಿ ಅನ್ಯಧರ್ಮಕ್ಕೆ ಸೇರಿದ್ದು, ಅವನ ಹೆಸರು ಬಹಿರಂಗಪಡಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸ್ವಾಮೀಜಿ ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಹೇಳಲು ಅವರು ಹಿಂಜರಿಯುತ್ತಿಲ್ಲ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಒಂದು ಧರ್ಮದ ತುಷ್ಟೀಕರಣ ನಡೆಯುತ್ತಿದೆ’ ಎಂದು ದೂರಿದರು.

ADVERTISEMENT

‘ವಾಸ್ತವದಲ್ಲಿ ಹಿರೇಕೋಡಿಯ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಟ್ಟಡ ಸಾಮಗ್ರಿಗಳ ಖರೀದಿಗೆ ಹಣ ಕೊಡಲಾಗಿತ್ತು. ಆದರೆ, ಹಣ ಪಡೆದವರು ಸಾಮಗ್ರಿ ಪೂರೈಸಿರಲಿಲ್ಲ. ಹಣವನ್ನೂ ಮರಳಿ ಕೊಟ್ಟಿರಲಿಲ್ಲ. ಇದನ್ನು ಆಶ್ರಮದ ಟ್ರಸ್ಟಿನವರು ಪ್ರಶ್ನಿಸಿದ್ದರು. ಮುನಿಗಳ ಗಮನಕ್ಕೆ ತಂದಾಗ, ಅವರೂ ಅಸಮಾಧಾನಗೊಂಡಿದ್ದರು. ಇದು ಮುನಿಗಳ ಹತ್ಯೆಗೆ ಕಾರಣವಾಗಿರಬಹುದೇ ಹೊರತು, ಅವರೇ ಸ್ವತಃ ಹಣಕಾಸಿನ ವ್ಯವಹಾರ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜೈನ ಸಮುದಾಯದ ಯಾವುದೇ ಮುನಿಗಳು ಎಂದಿಗೂ ಹಣ ಮುಟ್ಟುವುದಿಲ್ಲ ಮತ್ತು ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಆಶ್ರಮದ ಟ್ರಸ್ಟಿಗಳು ಅದನ್ನು ನಿರ್ವಹಿಸುತ್ತಾರೆ. ಆದರೆ, ಮುನಿಗಳ ಕುರಿತಾಗಿ ನಿರ್ದಿಷ್ಟವಾದ ಹೇಳಿಕೆ ನೀಡುವಂತೆ ಸ್ಥಳೀಯರಿಗೆ ಪೊಲೀಸರು ಒತ್ತಡ ಹಾಕುತ್ತಿರುವ ನಡೆ ಸರಿಯಲ್ಲ. ಸದನದಲ್ಲಿ ಸೋಮವಾರ ಈ ಬಗ್ಗೆ ಧ್ವನಿ ಎತ್ತುವೆ’ ಎಂದು ಅಭಯ ಪಾಟೀಲ ತಿಳಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ‘ಈ ಕೊಲೆ ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತೇವೆ. ಯಾರೂ ಪ್ರತಿಭಟನೆ ಮಾಡಬೇಡಿ ಎಂದು ಪೊಲೀಸರು ಕೇಳಿಕೊಂಡಿದ್ದರು. ಆದರೆ, ಈಗ ಸಮಾಜದ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.