ಸವದತ್ತಿ: ನಗರ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಿಂದ ಕೇಶ್, ಹೂವಿನಹಾರ, ಉಡುಗೊರೆಯೊಂದಿಗೆ ಸಾಗರೋಪಾದಿಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಶಾಸಕ ವಿಶ್ವಾಸ್ ವೈದ್ಯ ಅವರಿಗೆ 44 ನೇ ಜನ್ಮದಿನದ ಶುಭಕೋರಿ ಸಂಭ್ರಮಾಚರಿಸಿದರು.
ಹುಟ್ಟ ಹಬ್ಬದ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದು ಉಡುಗೊರೆಯಾಗಿ ಮಾರ್ಪಟ್ಟು, ಯುವ ಅಭಿಮಾನಿ ಬಳಗದಲ್ಲಿ ಸಂಭ್ರಮ ಮೆರಗು ನೀಡಿತು. ಪ್ರಮುಖ ವೃತ್ತಗಳಲ್ಲಿ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಶನಿವಾರ ರಾತ್ರಿಯಿಂದಲೇ ಅಭಿಮಾನಿಗಳು ಶಾಸಕರಿಗೆ ಶುಭ ಕಾಮನೆ ಕೋರಿದರು. ನಗರದ ಪ್ರಮುಖ ರಸ್ತೆಗಳ ಪಕ್ಕ, ವಿದ್ಯುತ್ ಕಂಬಗಳಿಗೆ ಬ್ಯಾನೆರ್, ಪ್ಲೆಕ್ಸ್ಗಳನ್ನು ಅಳವಡಿಸಿ ನೆಚ್ಚಿನ ನಾಯಕರಿಗೆ ಶುಭ ಹಾರೈಸಿದರು. ಲಂಬಾಣಿ ಸಮುದಾಯದ ಮಹಿಳೆಯರು, ಯುವಕರು ಸಂಪ್ರಾಯಕ ಉಡುಗೆ ತೊಟ್ಟು ಎಪಿಎಮ್ಸಿ ವೃತ್ತದಿಂದ ಶಾಸಕರ ಭಾವಚಿತ್ರ ಹಿಡಿದು ಜೈಕಾರ ಹಾಕುತ್ತಾ, ಅವರ ನಿವಾಸದವರೆಗೂ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಳಿಕ ನಿವಾಸದ ಆವರಣದಲ್ಲಿ ಸಂಪ್ರದಾಯಿಕ ನೃತ್ಯದ ಮೂಲಕ ಶಾಸಕರಿಗೆ ಶುಭ ಕೋರಿದರು.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೈದ್ಯ, ‘ತಾಲ್ಲೂಕಿನ ಜನ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿಯಾಗಿರುತ್ತೇನೆ. ಕ್ಷೇತ್ರದ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಶಿಕ್ಷಣ, ಆರೋಗ್ಯ, ಕೃಷಿ ಮತ್ತು ನೀರಾವರಿಗೆ ಹೆಚ್ಚು ಆಧ್ಯತೆ ನೀಡಿದ್ದೇನೆ, ಸಿ.ಎಂ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನೋಪಯೋಗಿ ಕಾರ್ಯ ನಡೆದು ಕ್ಷೇತ್ರ ಅಭಿಯತ್ತ ಸಾಗಿದೆ ಎಂದು ಜನರೇ ಮಾತಾಡಿಕೊಳ್ಳುತ್ತಿರುವದು ಖುಷಿ ತಂದಿದೆ. ಸಧ್ಯ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ಹೆಚ್ಚನೀಡಲಾಗುವುದು. ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಶ್ರಮಿಸುತ್ತೇನೆ. ಶಾಸಕನಾಗಿ ಮಾತ್ರವಲ್ಲದೇ ಬಿಡಿಸಿಸಿ ನಿರ್ದೇಶಕ ಹಾಗೂ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಉಪಾಧ್ಯಕ್ಷನನ್ನಾಗಿ ಆಯ್ಕೆಯಾಗಿದ್ದ ಜವಾಬ್ದಾರಿ ಹೆಚ್ಚಿದೆ. ಈ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಇದಕ್ಕೆ ಜನತೆಯ ಆಶೀರ್ವಾದ ಇರಲಿ’ ಎಂದರು.
ಶಾಸಕರ ಜನ್ಮದಿನದ ನಿಮಿತ್ತ ತೇರಾಪಂಥ ಭವನದಲ್ಲಿ ವಿಶ್ವಾಸ್ ವೈದ್ಯ ಪೌಂಡೇಶನ್ ವತಿಯಿಂದ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಅಲ್ಲಲ್ಲಿ ಬ್ಯಾರಿಕೇಡರ್ ಹಾಕಿಸಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. ತಾಲೂಲ್ಲೂಕಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಯಕರ್ತರು ಶಾಸಕರಿಗೆ ಶುಭ ಕೋರಿದರು. ಶನಿವಾರ ರಾತ್ರಿಯಿಂದಲೇ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಅಶ್ವತ್ ವೈದ್ಯ, ರವಿ ದೊಡಮನಿ, ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ಯಲ್ಲಪ್ಪ ಗೊರವನಕೊಳ್ಳ, ಪ್ರವೀಣ ರಾಮಪ್ಪನವರ, ಬಸವರಾಜ ಹುಗ್ಗಿ, ಜಗದೀಶ ಶಿರಸಂಗಿ, ಪುಟ್ಟಣ್ಣ ವೈದ್ಯ, ನಾಗಪ್ಪ ಬಡಪ್ಪನವರ, ವೆಂಕಣ್ಣ ವೈದ್ಯ, ಎಮ್.ಕೆ. ಬೇವೂರ ಹಾಗೂ ಸಾವಿರಾರು ಅಭಿಮಾನಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.