ADVERTISEMENT

ಕೌಶಲ ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

‘ಯುವ ಅಣಕು ಸಂಸತ್ ’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:23 IST
Last Updated 28 ನವೆಂಬರ್ 2019, 11:23 IST
ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ‘ಯುವ ಅಣಕು ಸಂಸತ್‌’ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಡಿಪಿಯು ರಾಜಶೇಖರ ಎನ್. ಪಟ್ಟಣಶೆಟ್ಟಿ ಮಾತನಾಡಿದರು. ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ, ಹನುಮಂತ ಚನ್ನಣ್ಣವರ, ಎಸ್.ಜಿ. ನಂಜಪ್ಪನವರ ಇದ್ದಾರೆ
ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ‘ಯುವ ಅಣಕು ಸಂಸತ್‌’ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಡಿಪಿಯು ರಾಜಶೇಖರ ಎನ್. ಪಟ್ಟಣಶೆಟ್ಟಿ ಮಾತನಾಡಿದರು. ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ, ಹನುಮಂತ ಚನ್ನಣ್ಣವರ, ಎಸ್.ಜಿ. ನಂಜಪ್ಪನವರ ಇದ್ದಾರೆ   

ಬೆಳಗಾವಿ: ‘ವಿದ್ಯಾರ್ಥಿಗಳು ಕೌಶಲ ವೃದ್ಧಿಸಿಕೊಳ್ಳಬೇಕು. ವಿಷಯವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುವ ಜ್ಞಾನ ಗಳಿಸಿಕೊಳ್ಳಬೇಕು’ ಎಂದು ಕಾನೂನು ಇಲಾಖೆಯ ಕಾರ್ಯದರ್ಶಿ ಹನುಮಂತ ಚನ್ನಣ್ಣವರ ಸಲಹೆ ನೀಡಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಮತ್ತು‌ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಯುವ ಅಣಕು ಸಂಸತ್’ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯುವಜನರು ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ರಾಜಕೀಯ ಅನುಭವ ಪಡೆದುಕೊಳ್ಳಬೇಕು’ ಎಂದರು.

ADVERTISEMENT

ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ ಮಾತನಾಡಿ, ‘ಮಾತುಗಳನ್ನು ಅರ್ಥೈಸಿಕೊಳ್ಳುವುದು ಒಂದು ಕಲೆ. ಪ್ರಚಲಿತ ವಿಷಯಗಳನ್ನು ಪ್ರಬುದ್ಧವಾಗಿ ಮಂಡಿಸುವ ಕಲೆ ಬೆಳೆಸಿಕೊಳ್ಳಬೇಕು. ಒಂದೇ ವಿಷಯವನ್ನು ತರ್ಕಬದ್ಧವಾಗಿ ಮಂಡಿಸಬೇಕು ಮತ್ತು ವಿವಿಧ ಪರಿಕಲ್ಪನೆಗಳ ಮೂಲಕ ವ್ಯಕ್ತಪಡಿಸಬೇಕು. ವಿಷಯಗಳನ್ನು ನಿಖರವಾಗಿ ಆಳಕ್ಕೆ ಹೋಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಕೌಶಲ ಪಡೆಯುವದಕ್ಕೆ ಪರಿಶ್ರಮ ಬೇಕಾಗುತ್ತದೆ. ಆಗ, ಮಾತ್ರ ವ್ಯವಸ್ಥಿತವಾಗಿ ಮಾತನಾಡುವ ಕಲೆ ಸಿದ್ಧಿಯಾಗುತ್ತದೆ’ ಎಂದು ತಿಳಿಸಿದರು.

ಡಿಡಿಪಿಯು ರಾಜಶೇಖರ ಎನ್. ಪಟ್ಟಣಶೆಟ್ಟಿ ಮಾತನಾಡಿ, ‘ಶಾಸನಗಳನ್ನು ರೂಪಿಸುವಾಗ ಚಿಂತನ-ಮಂಥನ ಮಾಡಬೇಕಾಗುತ್ತದೆ. ಶಾಸನಗಳಿಂದ ಸಾಮಾನ್ಯರ ಸಮಸ್ಯೆಗಳು ಪರಿಹಾರವಾಗಬೇಕು. ಯು ಪೀಳಿಗೆಗೆ ರಾಜಕಾರಣ ಅನುಕರಣೀಯವಾಗಬೇಕು. ರಾಜಧರ್ಮ ಪಾಲಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಜಿ. ನಂಜಪ್ಪನವರ, ‘ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಹೆಚ್ಚಿಸಿಕೊಳ್ಳಲು ಇಂತಹ ವೇದಿಕೆಗಳ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮತದಾರರ ಸಾಕ್ಷರತಾ ಕ್ಲಬ್‌ ಜಿಲ್ಲಾ ನೋಡಲ್ ಅಧಿಕಾರಿ ಮಲಿಕ್‌ ಮುಲ್ಲಾ ಮಾತನಾಡಿದರು.ಅಪೂರ್ವಾ ಕರಿಕಟ್ಟಿ, ಎನ್.ಆರ್. ಚಮಕೇರಿ ಸ್ವಾಗತಿಸಿದರು. ಎಸ್.ಬಿ. ಬನ್ನಿಮಟ್ಟಿ ನಿರೂಪಿಸಿದರು. ಎ.ಪಿ. ಕರಿಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.