ADVERTISEMENT

ಮಗಳನ್ನು ಬಾವಿಗೆಸೆದು, ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 16:16 IST
Last Updated 1 ಜೂನ್ 2022, 16:16 IST

ಅಥಣಿ: ತಾಲ್ಲೂಕಿನ ಬಾಳಿಗೇರಿ ಗ್ರಾಮದಲ್ಲಿ ಗೃಹಿಣಿಯೊಬ್ಬರು ಮಗಳನ್ನು ಬಾವಿಗೆ ತಳ್ಳಿ, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಇಬ್ಬರ ಶವಗಳು ಗೋಚರಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಮೃತರನ್ನು ಬಾಳಿಗೇರಿಯ ನಿವಾಸಿಗಳಾದ ಸವಿತಾ ಮುದಗೊಂಡ ಬೆಳಗಲಿ (24), ಪುತ್ರಿ ಪವಿತ್ರಾ ಬೆಳಗಲಿ (8) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

‘ಪತಿ ಮುದಗೊಂಡ ಅವರು ಹಳ್ಳಿಯಲ್ಲಿ ಒಕ್ಕಲುತನ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಂಬಂಧ ಸರಿಯಾಗಿಲ್ಲದ ಕಾರಣ ಪತಿ– ಪತ್ನಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ಸವಿತಾ ಅವರ ತವರು ಮನೆಯವರೂ ಬಂದು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಸವಿತಾ, ಮೇ 28ರಂದು ಮನೆ ಬಿಟ್ಟು ಹೋಗಿದ್ದರು. ಕುಟುಂಬದವರೆಲ್ಲ ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸಿದ್ದರು. ಮಂಗಳವಾರ ಸಂಜೆ ತಾಯಿ– ಮಗಳ ಶವ ಬಾವಿಯಲ್ಲಿ ಪತ್ತೆಯಾದವು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಮಗಳನ್ನು ಕೊಲೆ ಮಾಡಿದ ಆರೋಪದಡಿ ಸವಿತಾ ಅವರ ಮೇಲೆ (ಸೆಕ್ಷನ್‌ 302) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಥಣಿ ಸಿಪಿಐ ಶಂಕರಗೌಡ ಬಸನಗೌಡ, ಪಿಎಸ್‌ಐ ಕುಮಾರ ಹಾಡಕಾರ, ಹೆಡ್‌ಕಾನ್‌ಸ್ಟೆಬಲ್‌ ಎಲ್‌.ಎಸ್‌. ಅಜ್ಜಣಗಿ, ಎಎಸ್‌ಐ ಪಿ.ನಾಗರಾಜ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.