ADVERTISEMENT

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಕೈ ಎರಡು ತುಂಡು ಮಾಡಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 13:24 IST
Last Updated 26 ಅಕ್ಟೋಬರ್ 2020, 13:24 IST
ಬಸವರಾಜ ದಡ್ಡಿ
ಬಸವರಾಜ ದಡ್ಡಿ   

ಬೆಳಗಾವಿ: ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಮೃತನನ್ನು ಸಂಗಮೇಶ್ವರ ನಗರದ ಶೈಬಾಜ ಶೇರಖಾನ ಪಠಾಣ (24) ಎಂದು ಗುರುತಿಸಲಾಗಿದೆ.

ಬರ್ತ್‌ಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಪೊಂದು ಆತನನ್ನು ಹಿಂಬಾಲಿಸಿದೆ. ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದೆ. ಆಗ, ಶೈಬಾಜ್‌ ದ್ವಿಚಕ್ರವಾಹನ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿ ಕೊಚ್ಚಿ ಕೊಂದಿದ್ದಾರೆ. ಕೈಯನ್ನು ಕತ್ತರಿಸಿ ಎರಡು ಭಾಗ ಮಾಡಿದ್ದಾರೆ. ಮಚ್ಚಿನಿಂದ ಕುತ್ತಿಗೆಗೂ ಹೊಡೆದಿದ್ದಾರೆ. ಗ್ಯಾಂಗ್‌ವಾಡಿ ಪ್ರದೇಶದಲ್ಲಿ ಆತನನ್ನು ಕೆಲವರು ಹಿಂಬಾಲಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಆರೋಪಿಗಳ ಬಂಧನ:

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಮುತ್ಯಾನಟ್ಟಿಯ ಬಸವರಾಜ ಹೊಳೆಪ್ಪ ದಡ್ಡಿ (26) ಮತ್ತು ಬಸವಣ್ಣಿ ಸಿದ್ದಪ್ಪ ನಾಯಿಕ (27) ಎನ್ನುವವರನ್ನು ಬಂಧಿಸಲಾಗಿದೆ. ಮೃತ ಶೈಬಾಜ ಮತ್ತು ಆರೋಪಿ ಲಕ್ಷ್ಮಣ ದಡ್ಡಿ ನಡುವೆ ಆಗಿದ್ದ ಗಲಾಟೆಯ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ತಿಳಿಸಿದ್ದಾರೆ.

ಮೃತನ ತಂದೆ ಶೇರಖಾನ ಪಠಾಣ ನೀಡಿದ ದೂರಿನಂತೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಕೆಟ್‌ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮುತ್ಯಾನಟ್ಟಿಯ ಯುವಕನೊಬ್ಬ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಶೈಬಾಜಗೆ ಕೆಸರು ಹಾರಿತ್ತು. ಇದರಿಂದ ಸಿಟ್ಟಾಗಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದ. ಈ ಪ್ರಕರಣದಲ್ಲಿ ಶೈಬಾಜ್‌ ಬಂಧಿತನಾಗಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಗುಣಮುಖನಾಗಿ ಬಿಡುಗಡೆಯಾಗಿದ್ದ. ಶೈಬಾಜ್‌ ಜಾಮೀನು ಪಡೆದು ಹೊರಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.