ADVERTISEMENT

ಮೂಡಲಗಿ: ಮಲ್ಲಿಕಾರ್ಜುನ ದೇವಾಲಯ ಉದ್ಘಾಟನೆ 

₹48 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರು ನಿರ್ಮಿಸಿದ ಮಂದಿರ

ಬಾಲಶೇಖರ ಬಂದಿ
Published 25 ಫೆಬ್ರುವರಿ 2024, 4:21 IST
Last Updated 25 ಫೆಬ್ರುವರಿ 2024, 4:21 IST
ಮೂಡಲಗಿ ತಾಲ್ಲೂಕಿನ ಅವರಾದಿಯಲ್ಲಿ ಉದ್ಘಾಟನೆಯಾಗಲಿರುವ ಮಲ್ಲಿಕಾರ್ಜುನ ದೇವಸ್ಥಾನ
ಮೂಡಲಗಿ ತಾಲ್ಲೂಕಿನ ಅವರಾದಿಯಲ್ಲಿ ಉದ್ಘಾಟನೆಯಾಗಲಿರುವ ಮಲ್ಲಿಕಾರ್ಜುನ ದೇವಸ್ಥಾನ   

ಮೂಡಲಗಿ: ನೂರಾರು ವರ್ಷಗಳ ಪೂರ್ವ ಇತಿಹಾಸ ಹೊಂದಿರುವ ತಾಲ್ಲೂಕಿನ ಅವರಾದಿ ಗ್ರಾಮದ ಮಲ್ಲಿಕಾರ್ಜುನ ದೇವರು ಈ ಭಾಗದ ಆರಾಧ್ಯ ದೈವ. ಶತಮಾನಗಳಿಂದಲೂ ಚಿಕ್ಕ ದೇವಾಲಯದಲ್ಲಿಯೇ ಮಲ್ಲಿಕಾರ್ಜುನನ ಪೂಜೆ ಮಾಡಿಕೊಂಡು ಬಂದಿದ್ದ ಭಕ್ತರು ಈದೀಗ ದೇವಾಲಯವನ್ನು ನಿರ್ಮಿಸಿದ್ದಾರೆ.

ಗ್ರಾಮದ ಭಕ್ತರೆಲ್ಲ ಸೇರಿ ₹48 ಲಕ್ಷ ವೆಚ್ಚದಲ್ಲಿ ಹೊಸ ದೇವಸ್ಥಾನ ನಿರ್ಮಿಸಿದ್ದು, ಫೆ.25ರಿಂದ  29ರವರೆಗೆ ದೇವಸ್ಥಾನದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.

ದೇವಾಲಯದಲ್ಲಿ ದೊಡ್ಡಬಳ್ಳಾಪುರ ಶಿಲೆಯಲ್ಲಿ ಲಿಂಗ ಮತ್ತು ಬಸವಣ್ಣನ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷವೂ ಶ್ರಾವಣ ಮಾಸದ ಕೊನೆಯ ವಾರದಲ್ಲಿ ಮಲ್ಲಿಕಾರ್ಜನ ದೇವರ ಜಾತ್ರೆ ನಡಯುತ್ತದೆ. ಇಲ್ಲಿಯ ಅನೇಕ ಭಕ್ತರು ಪ್ರತಿ ವರ್ಷವೂ ಪಾದಯಾತ್ರೆಯ ಮೂಲಕ ಶ್ರೀಶೈಲ್‌ಕ್ಕೆ ಕಂಬಿ ಐದೇಶಿಗೆ ತೆರಳುವ ಹರಕೆ ಪೂರೈಸುವುದು ವಿಶೇಷ. ‘ನಂಬಿ ನಡೆದವರನ್ನು ಮಲ್ಲಿಕಾರ್ಜುನ ಕೈಬಿಡಲಾಡರ’ ಎನ್ನುವ ನಂಬಿಕೆ ಭಕ್ತರದ್ದಾಗಿದೆ.

ADVERTISEMENT

ಫೆ.25ರಂದು ಪ್ರತಿಷ್ಠಾಪನೆಯಾಗುವ ಮೂರ್ತಿಗಳನ್ನು ಘಟಪ್ರಭಾ ನದಿಯ ತಟದಿಂದ ಪೂರ್ಣಕುಂಭ ಮತ್ತು ವಿವಿಧ ವಾದ್ಯಗಳೊಂದಿಗೆ ದೇವಸ್ಥಾನದವರೆಗೆ ಬರಮಾಡಿಕೊಳ್ಳುವರು. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬಂಡಿಗಣಿಯ ದಾನೇಶ್ವರ ಶ್ರೀ ಉದ್ಘಾಟಿಸುವರು. ಶ್ರೀಗಳಿಗೆ ‘ಮಲ್ಲಿಕಾರ್ಜುನ ಕಂದ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 6.30ಕ್ಕೆ ಜರುಗುವ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸುವರು.

ಫೆ.26ರಂದು ಸಂಜೆ 6.30ಕ್ಕೆ ಜರುಗುವ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮೀಜಿ ವಹಿಸುವರು. ಫೆ.27ರಂದು ಸಂಜೆ 6.30ಕ್ಕೆ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಶೈಲ್‌ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸುವರು. ಸಮ್ಮುಖ ಮುನ್ಯಾಳದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಹುಬ್ಬಳ್ಳಿಯ ಚನ್ನಬಸಪ್ಪ ಮುತ್ಯಾ ಭಾಗಹಿಸುವರು.

ಫೆ.28ರಂದು ಸಂಜೆ 6.30ಕ್ಕೆ ನಾಗನೂರ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಫೆ.29ರಂದು ಬೆಳಿಗ್ಗೆ 9ಕ್ಕೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದ್ದು ಮರೆಗುದ್ದಿಯ ನಿರುಪಾದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ ಭಾಗಹಿಸುವರು. ಪ್ರತಿ ದಿನ ಅನ್ನಸಂತರ್ಪಣೆ ಜರುಗುವುದು. ಸಮಾರಂಭದಲ್ಲಿ ಜನಪ್ರತಿನಿಧಿಗಳಿಗೆ ಮತ್ತು ದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಸೇವಾ ಸಮಿತಿಯವರು ತಿಳಿಸಿದ್ದಾರೆ.

ಶ್ರೀಶೈಲ್‌ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.