ADVERTISEMENT

ನೇಹಾ ಕೊಲೆ: ಮುನವಳ್ಳಿಯಲ್ಲಿ ತೀವ್ರ ಪ್ರತಿಭಟನೆ; ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 5:57 IST
Last Updated 19 ಏಪ್ರಿಲ್ 2024, 5:57 IST
<div class="paragraphs"><p>ವಿದ್ಯಾರ್ಥಿನಿ ಕೊಲೆ ಖಂಡಿಸಿ ಮುನವಳ್ಳಿಯಲ್ಲಿ ಶುಕ್ರವಾರ ವಿವಿಧ ಸಮುದಾಯಗಳ ಮುಖಂಡರು ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ&nbsp;ನಡೆಸಿದರು.</p></div>

ವಿದ್ಯಾರ್ಥಿನಿ ಕೊಲೆ ಖಂಡಿಸಿ ಮುನವಳ್ಳಿಯಲ್ಲಿ ಶುಕ್ರವಾರ ವಿವಿಧ ಸಮುದಾಯಗಳ ಮುಖಂಡರು ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

   

ಮುನವಳ್ಳಿ (ಬೆಳಗಾವಿ ಜಿಲ್ಲೆ): ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿನಿ ಕೊಲೆ ಖಂಡಿಸಿ, ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ವಿವಿಧ ಸಮುದಾಯಗಳ ನಾಗರಿಕರು, ಬಿಜೆಪಿ, ಕಾಂಗ್ರೆಸ್‌ ಮುಖಂಡರು ಪ್ರತ್ಯೇಕವಾಗಿ ತೀವ್ರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ವ್ಯಾಪಾರ ವಹಿವಾಟು, ರಾಜ್ಯ ಹೆದ್ದಾರಿ ಸಂಚಾರ ಬಂದ್‌ ಮಾಡಿದರು.

ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ (25) ಅವರನ್ನು ಸಹಪಾಠಿ ಫಯಾಜ್‌ (27) ಕಾಲೇಜು ಆವರಣದಲ್ಲೇ ಚಾಕು ಇರಿದು ಕೊಲೆ ಮಾಡಿದ್ದ. ಫಯಾಜ್‌ ಮುನವಳ್ಳಿ ಗ್ರಾಮದವನಾದ್ದರಿಂದ ಗ್ರಾಮದ ಜನ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ADVERTISEMENT

ಶುಕ್ರವಾರ ಬೆಳಿಗ್ಗೆಯೇ ಯರಗಟ್ಟಿ– ಧಾರವಾಡ ನಡುವಿನ ರಾಜ್ಯ ಹೆದ್ದಾರಿ ಬಂದ್‌ ಮಾಡಿದರು. ಗ್ರಾಮದೊಳಗಿನ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಿದರು. ಇದರಿಂದ ಅಪಾರ ಸಂಖ್ಯೆಯ ವಾಹನಗಳು ಕಿಲೋಮೀಟರ್‌ ಗಟ್ಟಲೇ ಸಾಲಾಗಿ ನಿಂತವು. ಗೋಕಾಕ, ಯರಗಟ್ಟಿಯಿಂದ ಧಾರವಾಡ, ಯಲ್ಲಮ್ಮನಗುಡ್ಡಕ್ಕೆ ಹೋಗುವವರು ತೊಂದರೆ ಅನುಭವಿಸಿದರು.

ಐತಿಹಾಸಿಕ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಜನ ಧರಣಿ ನಡೆಸಿದರು. ಹಿಂದೂ, ಮುಸ್ಲಿಂ, ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಜನರೂ ಪಾಲ್ಗೊಂಡರು.

ವಿದ್ಯಾರ್ಥಿನಿ ಕೊಲೆ ಅತ್ಯಂತ ನೋವು ತರಿಸಿದೆ. ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ಕೊಡಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಅಘೋಷಿತ ಬಂದ್‌:

ರಾಜ್ಯ ಹೆದ್ದಾರಿಗೆ ಹೊಂದಿಕೊಂಡ, ಐತಿಹಾಸಿಕ ಮಹತ್ವದ ಪಡೆದ ಮುನವಳ್ಳಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ. ಆದರೆ, ಶುಕ್ರವಾರ ಬೆಳಿಗ್ಗೆಯಿಂದ ಇಡೀ ಗ್ರಾಮದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಎಲ್ಲ ವರ್ತಕರು ಸ್ವಯಂಪ್ರೇರಿತವಾಗಿ ಮಳಿಗೆಗಳನ್ನು ಬಂದ್‌ ಮಾಡಿದರು. ಬೀದಿಬದಿಯಲ್ಲಿ ಹಣ್ಣು, ಹೂವು, ತರಕಾರಿ ಮಾರುವವರೂ ತಮ್ಮ ವ್ಯಾಪಾರ ನಿಲ್ಲಿಸಿದರು.

ಗ್ರಾಮದಲ್ಲಿ ಜನಸಂಚಾರ ವಿರಳವಾಗಿದ್ದು, ಆತಂಕದ ವಾತಾವರಣ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.