ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ಸುಭಾಷ್ ನಗರದಲ್ಲಿ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಏ.13ರಂದು ಬೆಳಿಗ್ಗೆ 8.30ಕ್ಕೆ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಲಾಗುವುದು ಎಂದು ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಶಾಸಕ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡುವರು' ಎಂದರು.
'ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದೆ ಮಂಗಲಾ ಅಂಗಡಿ, ಕೆಎಲ್ಇ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕೆಎಲ್ಇ ಸೊಸೈಟಿ ನಿರ್ದೇಶಕ ಮಹಾಂತೇಶ ಕವಟಗಿಮಠ, ಮಹಾಸಭಾದ ಉಪಾಧ್ಯಕ್ಷ ರುದ್ರಣ್ಣ ಹೊಸಕೇರಿ ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳುವರು' ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಮಾರುತಿ ಬಿ.ಝಿರಲಿ ಮಾತನಾಡಿ, 'ಪಿಯು ಹಾಗೂ ನಂತರದ ವಿದ್ಯಾಭ್ಯಾಸಕ್ಕೆಂದು ಜಿಲ್ಲೆಯ ವಿವಿಧೆಡೆಯಿಂದ ಬರುವ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರಸ್ತುತ ವಸತಿ ಸಮಸ್ಯೆ ಕಾಡುತ್ತಿದೆ. ಅದನ್ನು ಹೋಗಲಾಡಿಸಲು ಹಾಸ್ಟೆಲ್ ನಿರ್ಮಿಸಲಾಗುತ್ತಿದೆ' ಎಂದರು.
'ಮೊದಲಿಗೆ 50 ವಿದ್ಯಾರ್ಥಿನಿಯರಿಗೆ ಅವಕಾಶ ಇರಲಿದೆ. ಸಮಾಜದ ಮೇಲೆ ಕಳಕಳಿ ಇರುವ ದಾನಿಗಳ ನೆರವಿನಿಂದ ಈ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ. ಸಿದ್ಧವಾದ ನಂತರ ನಿರ್ವಹಣೆ ಹೊಣೆಯನ್ನು ಮಹಾಸಭಾದ ಮಹಿಳಾ ಘಟಕದವರು ನೋಡಿಕೊಳ್ಳಲಿದ್ದಾರೆ' ಎಂದು ಹೇಳಿದರು.
'ಹಾಸ್ಟೆಲ್ನಲ್ಲಿ ವಸತಿಯೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಂಸ್ಕಾರವನ್ನೂ ನೀಡಬೇಕು ಎಂಬ ಉದ್ದೇಶ ಹೊಂದಲಾಗಿದೆ. ಸಮಾಜದ ಎಲ್ಲ ಒಳಪಂಗಡದವರಿಗೂ ಅವಕಾಶ ಇರಲಿದೆ. ದೇವರು ಶಕ್ತಿ ನೀಡಿದರೆ, ಮುಂಬರುವ ದಿನಗಳಲ್ಲಿ ಇತರ ಜಾತಿಗಳ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ನಲ್ಲಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು' ಎಂದು ಪ್ರತಿಕ್ರಿಯಿಸಿದರು.
'ಸರ್ಕಾರಿ ಹಾಸ್ಟೆಲ್ಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ' ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರರೂ ಆಗಿರುವ ಝಿರಲಿ ಹೇಳಿದರು.
ಪದಾಧಿಕಾರಿಗಳಾದ ರಮೇಶ ಕಳಸಣ್ಣವರ, ಜ್ಯೋತಿ ಬಾವಿಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.