
ಆದೇಶ ಪ್ರತಿ
ನಿಪ್ಪಾಣಿ: 10ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಪೋಷಕರು ಪ್ರತಿದಿನ ಸಂಜೆ 6ರಿಂದ 9ರವರೆಗೆ ಮೊಬೈಲ್ ಫೋನ್ ಮತ್ತು ಟಿವಿಗಳನ್ನು ಆಫ್ ಮಾಡುವಂತೆ ನಿಪ್ಪಾಣಿ ತಹಶೀಲ್ದಾರ್ ಸುರೇಶ್ ಮುಂಜೆ ಸೂಚನೆ ನೀಡಿದ್ದಾರೆ.
ಸೂಚನೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ತಹಶೀಲ್ದಾರರು 8 ಸದಸ್ಯರ ಪ್ರೌಢಶಾಲಾ ಮಟ್ಟದ ಅಧ್ಯಯನ ಮೇಲ್ವಿಚಾರಣಾ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಮುಖ್ಯ ಶಿಕ್ಷಕರು ಅಧ್ಯಕ್ಷರಾಗಿದ್ದು 10ನೇ ತರಗತಿಯ ಶಿಕ್ಷಕರು ಸಹಕಾರ್ಯದರ್ಶಿಯಾಗಿ ಹಾಗೂ ಪೌರಾಯುಕ್ತರು/ಮುಖ್ಯಾಧಿಕಾರಿ/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಶು ಇಲಾಖೆ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಸಂಬಂಧಪಟ್ಟ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು/ಶುಷ್ರೂಕಿಯರು ಮತ್ತು ಸಂಬಂಧಪಟ್ಟ ಗ್ರಾಮದ ಬೀಟ್ ಪೊಲೀಸರು ಸದಸ್ಯರಾಗಿದ್ದಾರೆ.
ಸಮಿತಿಯು ವಾರಕ್ಕೊಮ್ಮೆ ಸಭೆ ಸೇರಿ ಈ ಕಾರ್ಯದ ಪ್ರಗತಿಯನ್ನು ಪರಿಶೀಲಿಸಬೇಕು. ಪ್ರತಿ ಇಲಾಖೆಯ ಸಿಬ್ಬಂದಿಯ ತಮಗೆ ವಹಿಸಿದ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ಈ ಅವಧಿಯಲ್ಲಿ ಮೊಬೈಲ್ ಬಳಕೆ ಹಾಗೂ ದೂರದರ್ಶನ ವೀಕ್ಷಣೆ ಮಾಡದಂತೆ ಹಾಗೂ ವಿದ್ಯಾರ್ಥಿಯ ಕಲಿಕೆ/ಅಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕೋರಬೇಕು. ಅಕ್ಕಪಕ್ಕದ ಮನೆಯವರಿಗೂ ಸಹಕರಿಸಲು ಕೋರಬೇಕು’ ಎಂದು ಸಮಿತಿಗೆ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.