ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ಸಮಾಜದ ಮುಖಂಡ ಸಭೆಯಲ್ಲಿ ಅವರು ಮಾತನಾಡಿದರು.
‘ಜ. 14ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಆರಂಭವಾಗಲಿದೆ. ಒಟ್ಟು 700 ಕಿ.ಮೀ. ಪಾದಯಾತ್ರೆ ಇದಾಗಿರಲಿದೆ. ಬೆಳಿಗ್ಗೆ 10 ಕಿ.ಮೀ. ಮತ್ತು ಸಂಜೆ 10 ಕಿ.ಮೀ. ಸೇರಿ ದಿನಕ್ಕೆ 20 ಕಿ.ಮೀ. ಕ್ರಮಿಸಲಿದ್ದೇವೆ. ಹೀಗೆ 35 ದಿನಕ್ಕೆ ಬೆಂಗಳೂರು ತಲುಪಬಹುದು. ಆದರೆ, ಮುಕ್ತಾಯದ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಸರ್ಕಾರವು ಯಾವಾಗ ಬಜೆಟ್ ಅಧಿವೇಶನದ ಶುರು ಮಾಡುತ್ತದೆಯೋ ಆ ವೇಳೆ ವಿಧಾನಸೌಧಕ್ಕೆ ದೊಡ್ಡ ಪ್ರಮಾಣದಲ್ಲಿ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ’ ಎಂದರು.
‘ಶ್ರೀಗಳ ಪಾದಯಾತ್ರೆ ಮುಗಿದ ಮೇಲೆ ಅಧಿವೇಶನ ನಡೆಸಬೇಕು ಎಂದು ಸರ್ಕಾರದವರು ಯೋಜಿಸಿದ್ದಾರೆ. ಆದರೆ, ನಾವು ಅಧಿವೇಶನ ಯಾವಾಗ ಶುರು ಅಗುತ್ತದೆಯೋ ಆಗ ಪಾದಯಾತ್ರೆ ಮುಕ್ತಾಯಗೊಳಿಸುತ್ತೇವೆ. ಆ ಸಂದರ್ಭದಲ್ಲಿ ಅಲ್ಲಿ ನಮ್ಮ ಸಮಾಜದ ಎಲ್ಲ ಶಾಸಕರೂ ನಮಗೆ ಸಿಗುತ್ತಾರೆ. ಅವರ ಮೇಲೂ ಒತ್ತಡ ಹೇರಲಾಗುವುದು. ನಾನು ಮೀಸಲಾತಿಯನ್ನು ಸ್ವಾರ್ಥಕ್ಕಾಗಿ ಕೇಳುತ್ತಿಲ್ಲ. ಇಡೀ ಸಮಾಜಕ್ಕಾಗಿ ಕೇಳುತ್ತಿದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.