ADVERTISEMENT

ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ: ಹಂಚಾಟೆ ಸಂಜೀವಕುಮಾರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:08 IST
Last Updated 12 ಏಪ್ರಿಲ್ 2019, 14:08 IST

ಬೆಳಗಾವಿ: ‘ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಾಗುವ ವಿವಾದ ಬಗೆಹರಿಸುವ ಸಲುವಾಗಿ ಕಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ಜನರು ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ್ ತಿಳಿಸಿದ್ದಾರೆ.

‘ಪ್ರಯಾಣ, ಸರಕು ಸಾಗಣೆ ಸೇವೆ, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ಆಸ್ಪತ್ರೆ ಅಥವಾ ವಿತರಣೆ ಸೇವೆಗಳು, ವಿಮೆ, ಬ್ಯಾಂಕಿಂಗ್–ಹಣಕಾಸು ಸಂಸ್ಥೆಗಳು, ಶಿಕ್ಷಣ, ವಸತಿ ಹಾಗೂ ರಿಯಲ್‌ಎಸ್ಟೇಟ್ ಸೇವೆಗಳ ಸಂಬಂಧ ವಿವಾದಗಳನ್ನು ಮಾತ್ರ ಕಾಯಂ ಜನತಾ ನ್ಯಾಯಾಲಯದಲ್ಲಿ ಬಗೆಹರಿಸಲಾಗುವುದು. ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಇಲ್ಲಿ ಆದ ತೀರ್ಪಿಗೆ ಸಂಬಂಧಿಸಿ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಬೆಳಗಾವಿಯಲ್ಲಿ ಈ ನ್ಯಾಯಾಲಯವಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರ ಮಟ್ಟದ ನ್ಯಾಯಾಧೀಶ ಹಾಗೂ ಇಬ್ಬರು ಸದಸ್ಯರಿದ್ದಾರೆ. ಗ್ರಾಹಕರ ನ್ಯಾಯಾಲಯದ ಮಾದರಿಯಲ್ಲೇ ಅತಿ ಸರಳವಾಗಿ ದೂರುಗಳ ವಿಚಾರಣೆ ನಡೆಯಲಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.