ADVERTISEMENT

ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ತೆರೆದಿದ್ದ ಜನಾರೋಗ್ಯ ವಿಮಾ ಕೇಂದ್ರಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:27 IST
Last Updated 13 ಜನವರಿ 2024, 15:27 IST
<div class="paragraphs"><p>ಬೆಳಗಾವಿಯಲ್ಲಿ ತೆರೆದ ಮಹಾರಾಷ್ಟ್ರದ ಜನಾರೋಗ್ಯ ವಿಮೆಯ ಸೇವಾ ಕೇಂದ್ರವನ್ನು ಡಿಎಚ್‌ಒ ಡಾ.ಮಹೇಶ ಕೋಣೆ ನೇತೃತ್ವದಲ್ಲಿ ಶನಿವಾರ ಬಂದ್‌ ಮಾಡಲಾಯಿತು</p></div>

ಬೆಳಗಾವಿಯಲ್ಲಿ ತೆರೆದ ಮಹಾರಾಷ್ಟ್ರದ ಜನಾರೋಗ್ಯ ವಿಮೆಯ ಸೇವಾ ಕೇಂದ್ರವನ್ನು ಡಿಎಚ್‌ಒ ಡಾ.ಮಹೇಶ ಕೋಣೆ ನೇತೃತ್ವದಲ್ಲಿ ಶನಿವಾರ ಬಂದ್‌ ಮಾಡಲಾಯಿತು

   

ಬೆಳಗಾವಿ: ನಗರದಲ್ಲಿ ತೆರೆಯಲಾಗಿದ್ದ ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ ಯೋಜನೆಯ ನಾಲ್ಕು ಸೇವಾ ಕೇಂದ್ರಗಳಿಗೆ ಜಿಲ್ಲಾಡಳಿತ ಶನಿವಾರ ಬೀಗ ಹಾಕಿದೆ.

ಕರ್ನಾಟಕದ ಗಡಿಯೊಳಗಿನ 865 ಹಳ್ಳಿ– ಪಟ್ಟಣಗಳಲ್ಲಿ ಇರುವ ಮರಾಠಿ ಭಾಷಿಗರಿಗಾಗಿ ಈ ವಿಮಾ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ಬೆಳಗಾವಿಯಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನು ತೆರೆದು ಅರ್ಜಿ ವಿತರಣೆ, ‘ನಾನು ಮರಾಠಿ ಭಾಷಿಗ’ ಎಂಬ ಮುಚ್ಚಳಿಕೆ ಪತ್ರ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಶಿಫಾರಸು ಪತ್ರಗಳನ್ನೂ ನೀಡುತ್ತಿತ್ತು.

ADVERTISEMENT

‘ಈ ಸೇವಾ ಕೇಂದ್ರಗಳು ಅನಧಿಕೃತವಾಗಿವೆ. ಮರಾಠಿಗರನ್ನು ರಾಜ್ಯದ ವಿರುದ್ಧ ಎತ್ತಿಕಟ್ಟಲು ಮಹಾರಾಷ್ಟ್ರ ಇಂಥ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ದೂರು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ನಾಲ್ಕೂ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಯಿತು. ಯಾವುದೇ ಅನುಮತಿ ಇಲ್ಲದೇ ಹೊರರಾಜ್ಯದ ಜನಾರೋಗ್ಯ ವಿಮೆಯ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದ್ದರಿಂದ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಕಾರಣ ಕೇಳಿ ನೋಟಿಸ್‌ ಕೂಡ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ರಾಜ್ಯದಲ್ಲಿರುವ ಮರಾಠಿಗರೆಲ್ಲ ಮಹಾರಾಷ್ಟ್ರದ ಪರ ಇದ್ದಾರೆ ಎಂಬ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಏಕನಾಥ ಶಿಂಧೆ ಸರ್ಕಾರ ಈ ವಿಮೆ ಜಾರಿ ಮಾಡಿದೆ ಎಂದು ಕನ್ನಡ ಹೋರಾಟಗಾರರು ದೂರಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.