ADVERTISEMENT

ಕೃಷಿ ಕಾರ್ಮಿಕರಿಗೆ ಮಗ ತಂದ ಖುಷಿ

ಪಿಯು ವಾಣಿಜ್ಯ ವಿಭಾಗದಲ್ಲಿ ಶೇ 96.16ರಷ್ಟು ಸಾಧನೆ ತೋರಿದ ಗ್ರಾಮೀಣ ಪ್ರತಿಭೆ

ಇಮಾಮ್‌ಹುಸೇನ್‌ ಗೂಡುನವರ
Published 19 ಜೂನ್ 2022, 4:44 IST
Last Updated 19 ಜೂನ್ 2022, 4:44 IST
ರ್‍ಯಾಂಕ್‌ ಪಡೆದ ಮಲ್ಲಿಕಾರ್ಜುನಗೆ ಸಿಹಿ ತಿನ್ನಿಸಿದ ತಂದೆ ಬಸವರಾಜ ಹಾಗೂ ತಾಯಿ ಯಶೋದಾ
ರ್‍ಯಾಂಕ್‌ ಪಡೆದ ಮಲ್ಲಿಕಾರ್ಜುನಗೆ ಸಿಹಿ ತಿನ್ನಿಸಿದ ತಂದೆ ಬಸವರಾಜ ಹಾಗೂ ತಾಯಿ ಯಶೋದಾ   

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ತಂದೆ– ತಾಯಿ ನಿತ್ಯ ಬೇರೆಯವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸಂಕಷ್ಟದ ಮಧ್ಯೆಯೂ ನನ್ನನ್ನು ಓದಿಸಿದ್ದಾರೆ. ಅವರ ಶ್ರಮ ಹಾಗೂ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಉತ್ತಮ ಅಂಕ ದೊರೆತಿದ್ದಕ್ಕೆ ಖುಷಿಯಾಗಿದ್ದೇನೆ. ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸಿದೆ. ಅದು ಈಡೇರಿದಾಗ ಹೆತ್ತವರ ಭಾರ ಕಡಿಮೆ ಮಾಡಿದಂತಾಗುತ್ತದೆ...

ಅಚ್ಚಗನ್ನಡದ ಗ್ರಾಮೀಣ ಪ್ರತಿಭೆ ಮಲ್ಲಿಕಾರ್ಜುನ ಗಿಡನವರ ಎಂಬ ವಿದ್ಯಾರ್ಥಿಯ ಮನದಾಳವಿದು. ಜಿಲ್ಲೆಯ ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದ ಶಿವಾನಂದ ಭಾರತೀ ಪದವಿಪೂರ್ವ ಕಾಲೇಜಿನ ಈ ವಿದ್ಯಾರ್ಥಿ, ಪ್ರಸಕ್ತ ದ್ವಿತೀಯ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ 96.16ರಷ್ಟು ಸಾಧನೆ ತೋರಿದ್ದಾರೆ.

ADVERTISEMENT

ಸರ್ಕಾರಿ ಹಾಸ್ಟೆಲ್‌ನಲ್ಲಿ ಇದ್ದು ಓದಿದ ವಿದ್ಯಾರ್ಥಿ
ಹೆತ್ತವರ ಕಷ್ಟವೇಮರೆತು ಹೋಗುಂವಥಸಾಧನೆಮಾಡಿದ್ದಾರೆ. ಮಲ್ಲಿಕಾರ್ಜುನ 600ಕ್ಕೆ 577 ಅಂಕ ಗಳಿಸಿದ್ದಾರೆ. ಈ ಪೈಕಿ ಅರ್ಥ
ಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರದಲ್ಲಿ ತಲಾ 100 ಅಂಕ ಬಾಚಿಕೊಂಡಿರುವುದು ಅವರ ಓದಿನ ಹಸಿವಿಗೆ ಸಾಕ್ಷಿ.

‘ತಂದೆ ಬಸವರಾಜ ಹಾಗೂ ತಾಯಿ ಯಶೋದಾ ಜೀವನೋಪಾಯಕ್ಕೆ ಕೂಲಿ ಮಾಡುತ್ತಾರೆ. ಬಿಡುವು ಇದ್ದಾಗ ನಾನೂ ನೆರವಾಗುತ್ತೇನೆ. ಹೆತ್ತವರು ಅವರಿವರ ಬಳಿ ಸಾಲ ಮಾಡಿ ನನ್ನನ್ನೂ ಓದಿಸಿದರು. ಅವರ ಶ್ರಮ ವ್ಯರ್ಥವಾಗಬಾರದು ಎಂದು ನಿರ್ಧರಿಸಿದೆ. ಕಾಲೇಜಿನಲ್ಲಿ ಉಪನ್ಯಾಸಕರ ಪಾಠ ಸ್ಪಷ್ಟವಾಗಿ ಆಲಿಸಿದೆ. ಸಂಜೆ 4.30ರಿಂದ 6 ತಾಸು ಏಕಾಗ್ರತೆಯಿಂದ ಓದುತ್ತಿದ್ದೆ. ಅದು ಈಗ ಫಲ ನೀಡಿದೆ’ ಎಂದು ಮಲ್ಲಿಕಾರ್ಜುನ ಖುಷಿಪಟ್ಟರು.

ಮುಂದಿನ ಓದಿನದ್ದೆ ಚಿಂತೆ: ‘ಗೋಕಾಕದಲ್ಲಿ ಓದುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 82 ಅಂಕ ಗಳಿಸಿದ್ದೆ. ಮುಂದೆ ಬಿ.ಕಾಂ ಪ್ರವೇಶ ಪಡೆಯಬೇಕೆನ್ನುವ ಆಸೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಿದ್ದೇನೆ. ಆದರೆ, ಶೈಕ್ಷಣಿಕ ಶುಲ್ಕ ಭರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದರು.

‘ಗೋಕಾಕ ತಾಲ್ಲೂಕಿನ ಬೆಣಚಿನಮರಡಿಯಲ್ಲಿ ನಮ್ಮ ಮೂವರು ಸಹೋದರರ ಮಧ್ಯೆ ಒಂದೇ ಎಕರೆ ಭೂಮಿಯಿದೆ. ಮಕ್ಕಳಿಂದ ಬದುಕು ಸುಧಾರಿಸಬಹುದು ಎಂಬ ಆಶಯದಿಂದ ಇಬ್ಬರನ್ನೂ ಓದಿಸುತ್ತಿದ್ದೇವೆ. ಹಿರಿಯವನಾದ ಕೃಷ್ಣಾ ಬಿ.ಎಸ್ಸಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದಾನೆ. ಕಿರಿಯವನೂ ಸಾಧನೆ ಮಾಡಿರುವುದುರು ಹೆಮ್ಮೆ ತಂದಿದೆ. ಸರ್ಕಾರ ಅಥವಾ ಸಂಘ–ಸಂಸ್ಥೆಗಳು ಮಲ್ಲಿಕಾರ್ಜುನನ ಮುಂದಿನ ಓದಿಗೆ ನೆರವಾಗಬೇಕು’ ಎಂದು ಬಸವರಾಜ ಕೋರಿದರು.

ಮಲ್ಲಿಕಾರ್ಜುನ ಸಂಪರ್ಕಕ್ಕೆ 9972902655.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.