ADVERTISEMENT

ಅಭಿಮಾನ ಕಂಡು ಬೆರಗಾದ ರಕ್ಷಿತ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 15:55 IST
Last Updated 5 ಜನವರಿ 2020, 15:55 IST
   

ಬೆಳಗಾವಿ: ಇಲ್ಲಿನ ‘ಚಿತ್ರಾ’ ಹಾಗೂ ‘ಗ್ಲೋಬ್’ ಚಿತ್ರಮಂದಿರಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಲನಚಿತ್ರ ಪ್ರದರ್ಶನದ ವೇಳೆ ಭಾನುವಾರ ಭೇಟಿ ನೀಡಿದ್ದ ಆ ಚಿತ್ರದ ನಾಯಕ ನಟ ರಕ್ಷಿತ್‌ ಶೆಟ್ಟಿ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ತೆರೆ ಕಂಡಾಗಿನಿಂದಲೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ಹಾಗೂ ಅಭಿಮಾನಿಗಳಿಂದ ಪ್ರೀತಿ ವ್ಯಕ್ತವಾಗಿದ್ದಕ್ಕೆ ಮನಸೋತರು.

ಪ್ರೇಕ್ಷಕರೊಂದಿಗೆ ಕೆಲ ಹೊತ್ತು ಸಿನಿಮಾ ವೀಕ್ಷಿಸಿದ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ, ಮೊದಲ ವಾರವೇ ಹಿಂದಿನ ‘ಕಿರಿಕ್‌ ಪಾರ್ಟಿ’ ಸಿನಿಮಾಗಿಂತ 4 ಪಟ್ಟು ಹೆಚ್ಚು ವರಮಾನ ಗಳಿಸಿದೆ. ಮಾಸ್ ಪ್ರೇಕ್ಷಕರೊಂದಿಗೆ ಇಡೀ ಕುಟುಂಬವನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಸಿನಿಮಾ ವೀಕ್ಷಿಸಿದವರು ಒಳ್ಳೆಯ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಲೂ ಅನುಕೂಲವಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿದೆ. ಮುಂದಿನ ವಾರ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಹೆಚ್ಚು ಖುಷಿ ತಂದಿದೆ’ ಎಂದರು. ನಟರಾದ ಪ್ರಮೋದ ಶೆಟ್ಟಿ ಹಾಗೂ ಬಾಲಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.