ADVERTISEMENT

ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’

ಚನ್ನಪ್ಪ ಮಾದರ
Published 2 ಫೆಬ್ರುವರಿ 2026, 5:27 IST
Last Updated 2 ಫೆಬ್ರುವರಿ 2026, 5:27 IST
ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳದ ದೇವಸ್ಥಾನ
ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳದ ದೇವಸ್ಥಾನ   

ರಾಮದುರ್ಗ: ‘ಕೊಳ್ಳಗಳ ನಾಡು’ ಎಂದು ಖ್ಯಾತ ರಾಮದುರ್ಗ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕೊರತೆಯಿಂದ ಕೆಲವು ತಾಣಗಳು ಮುಚ್ಚಿಹೋಗುವ ಆತಂಕ ಮನೆ ಮಾಡಿದೆ.

ತಾಲ್ಲೂಕಿನಲ್ಲಿ 8 ಕೊಳ್ಳಗಳು ಇವೆ. ಅವುಗಳಲ್ಲಿ ಮುಖ್ಯವಾಗಿ ಸುರೇಬಾನದ ಶಬರಿ ಕೊಳ್ಳ, ಕಲ್ಲೂರಿನ ಸಿದ್ದೇಶ್ವರ ಕೊಳ್ಳ, ಈಶ್ವರಪ್ಪನ ಕೊಳ್ಳ, ತೊರಗಲ್‌ದ ಮೇಗುಂಡೇಶ್ವರ ಕೊಳ್ಳ, ಹೂವಿನ ಕೊಳ್ಳ, ಮುಳ್ಳೂರಿನ ರಾಮತೀರ್ಥಕೊಳ್ಳ, ಇಡಗಲ್ಲಿನ ಪವಾಡೆಪ್ಪನ ಕೊಳ್ಳ, ಮುದೇನೂರಿನ ಬಾಳೇಕೊಳ್ಳಗಳು ಪ್ರಮುಖವಾಗಿವೆ. ಕೆಲವು ಕೊಳ್ಳಗಳ ದೇವಸ್ಥಾನಗಳು ವಿವಾಹ ಸಮಾರಂಭ, ರಾಜಕೀಯ ಕೆಲಸಕ್ಕೆ ಮತ್ತು ಪೋಕರಿಗಳ ಪಾರ್ಟಿಗೆ ಬಳಕೆಯಾಗುತ್ತಿವೆ.

ಶಬರಿಕೊಳ್ಳ: ರಾಮಾಯಣದ ಕತೆಯಲ್ಲಿ ಬರುವ ಶಬರಿಯ ತಾಣವಿದು ಎಂದು ಉಲ್ಲೇಖಗಳು ಸಿಗುತ್ತವೆ. ಸೀತಾಮಾತೆಯ ಅನ್ವೇಷಣೆಗೆ ಹೊರಟ ರಾಮ ರಾಮದುರ್ಗದಿಂದ 12 ಕಿ.ಮೀ. ದೂರದ ಶಬರಿ ಕೊಳ್ಳಕ್ಕೆ ಭೇಟಿ ನೀಡಿದ್ದ. ಅಲ್ಲಿ ರಾಮಭಕ್ತೆ ಶಬರಿ ಕಚ್ಚಿದ ಬಾರೆ ಹಣ್ಣುಗಳನ್ನು ನೀಡಿದಳು ಎಂಬುದು ಇತಿಹಾಸದುದ್ದಕ್ಕೂ ದಾಖಲಿಸುತ್ತ ಬರಲಾಗಿದೆ. ಈ ಕ್ಷೇತ್ರದಲ್ಲಿ ಶಬರಿ ದೇವಸ್ಥಾನ, ಬಾರೆ ಹಣ್ಣಿನ ಮರಗಳು, ಎರಡು ಪುಷ್ಕರಣಿ, ಹರಿಯುವ ಝರಿ, ದುಮ್ಮುಕ್ಕುವ ಜಲಪಾತಗಳು ಪ್ರವಾಸಿಗರ ಮನ ಸೂರೆಗೊಳ್ಳುತ್ತಿವೆ. ಅಲ್ಲಿ ದೇವಸ್ಥಾನ ಸಮಿತಿಯವರು ದೇವಸ್ಥಾನದ ಜೀರ್ಣೋದ್ಧಾರ, ಕಲ್ಯಾಣ ಮಂಟಪ ವಿಶಾಲವಾದ ಬಯಲು ಪ್ರದೇಶ ನಿರ್ಮಿಸಿ ವರ್ಷಕ್ಕೊಮ್ಮೆ ಶಬರಿಯ ರಥೋತ್ಸವವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅಲ್ಲಿ ಬಡವರ ಮದುವೆಗಳು ಜರುಗುತ್ತವೆ ಎಂಬುದು ಗಮನಾರ್ಹವಾಗಿದೆ.

ADVERTISEMENT

ಸಿದ್ದೇಶ್ವರ ಕೊಳ್ಳ: ರಾಮದುರ್ಗದಿಂದ ಸುಮಾರು 13 ಕಿ. ಮೀ. ದೂರದ ಕಲ್ಲೂರಿನ ಸಿದ್ದೇಶ್ವರ ಕೊಳ್ಳವು ತಾಲ್ಲೂಕಿನ ಗೊಡಚಿ ಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿ ಹೊಂದಿದೆ. ಸಿದ್ದೇಶ್ವರ ದೇವಸ್ಥಾನ, ನಿರಂತರ ಹರಿಯುವ ಝರಿ, ಎತ್ತರದ ಶಿವನ ಮೂರ್ತಿ, ವಿಶಾಲವಾದ ಕಲ್ಯಾಣ ಮಂಟಪಗಳು ತಲೆ ಎತ್ತಿವೆ. ಅಲ್ಲಿಯೂ ರಾಜಕೀಯ ಕಾರ್ಯಕ್ರಮಗಳು, ವಿವಾಹ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಸಾಗಿವೆ. ಅಲ್ಲಿ ಭಕ್ತರಿಗಾಗಿ ಅನ್ನದಾಸೋಹವು ಜರುಗುತ್ತಿದೆ. ಇಲ್ಲಿಯೂ ಪ್ರತಿವರ್ಷ ಸಿದ್ದೇಶ್ವರನ ರಥೋತ್ಸವ ನಡೆದುಕೊಂಡು ಬಂದಿದೆ.

ಮೇಗುಂಡೇಶ್ವರ ಕೊಳ್ಳ: ರಾಮದುರ್ಗದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಮೇಗುಂಡೇಶ್ವರ ಕೊಳ್ಳದ ವಿಶೇಷತೆ ಹೆಚ್ಚಿದೆ. ಮೇಗುಂಡೇಶ್ವರ ದೇವಸ್ಥಾನ, ಹರಿಯುವ ಝರಿ, ಜಲಪಾತ, ಕಲ್ಯಾಣ ಮಂಟಪ ಇದ್ದು, ಅಲ್ಲಿಯೂ ಕೆಲವರು ಮದುವೆ ಮಾಡಿಕೊಂಡು ಬರುತ್ತಾರೆ.

ಈಶ್ವರಪ್ಪನ ಕೊಳ್ಳ: ರಾಮದುರ್ಗಕ್ಕೆ ಹೊಂದಿಕೊಂಡಿರುವ 3 ಕಿ.ಮೀ. ದೂರದಲ್ಲಿರುವ ಈಶ್ವರಪ್ಪನ ಕೊಳ್ಳದ ಚಾರಣಕ್ಕೆ ಹಲವಾರು ಜನ ನಡೆದುಕೊಂಡು ಹೋಗಿ ಬರುವುದು ಸಾಮಾನ್ಯವಿದೆ. ಇಲ್ಲಿ ಹರಿಯುವ ಝರಿ, ಧುಮುಕುವ ಜಲಪಾತ ಇದ್ದರೂ ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲ. ಈಶ್ವರಪ್ಪನ ಕೊಳ್ಳ ಇದೆ ಎಂದು ಜನರಿಗೆ ಗೊತ್ತಾಗಲಿ ಎಂದು ಅರಣ್ಯ ಇಲಾಖೆಯೇ ಇಲ್ಲೊಂದು ಸ್ವಾಗತ ಮಂಟಪ ನಿರ್ಮಿಸಿದ್ದು ಬಿಟ್ಟರೆ ಇನ್ನಿತರ ಅಭಿವೃದ್ಧಿಗಳು ಇಲ್ಲವಾಗಿದೆ.

ಹೂವಿನ ಕೊಳ್ಳ: ಸುಮಾರು 2 ಕಿ.ಮೀ. ದೂರದಲ್ಲಿರುವ ಹೂವಿನ ಕೊಳ್ಳದ ಸೊಬಗನ್ನು ಸವಿಯಲು ಮಳೆಗಾಲದಲ್ಲಿ ಯುವಕರ ದಂಡು ಹೋಗಿಬರುತ್ತದೆ. ಇಲ್ಲಿ ದೇವಸ್ಥಾನವಿಲ್ಲ. ನಿರಂತರ ಹರಿಯುವ ಝರಿ, ಮನಮೋಹಕ ಎರಡು ಜಲಪಾತ, ಈಜಲು ವಿಶಾಲವಾದ ನೀರಿನ ಹೊಂಡ ಇದ್ದು ಮಳೆಗಾಲದ ಹೊತ್ತಿಗೆ ತಂಡತಂಡವಾಗಿ ಹೋಗಿ ಚಾರಣಿಗರು ಪ್ರಕೃತಿಯ ಸೌಂದರ್ಯವನ್ನು ಸವಿದು ಆನಂದಿಸುತ್ತಾರೆ.

ಇಷ್ಟೆಲ್ಲ ರಾಮದುರ್ಗ ತಾಲ್ಲೂಕಿನಲ್ಲಿ ಕೊಳ್ಳಗಳು, ಪ್ರವಾಸಿ ತಾಣಗಳು, ದೇವಸ್ಥಾನಗಳು ಇದ್ದರೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾತ್ರ ಇಲ್ಲಿ ಅಭಿವೃದ್ಧಿ ಮಾಡದೇ ಭಕ್ತರು, ಚಾರಣಿಗರು ಅವಕಾಶ ವಂಚಿತರಾಗಿದ್ದಾರೆ. ಪ್ರಾಚೀನ ಕಾಲದ ಪರಂಪರೆ ಉಳಿಸಲು ಪ್ರವಾಸೋದ್ಯಮ ಇಲಾಖೆ ಹೊಳೆ ಹರಿದಂತೆ ಹಣದ ಕರ್ಚು ಮಾಡುತ್ತಿದೆ. ಇಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ ಎಂಬುದು ಭಕ್ತರ, ಚಾರಣಿಗರ ಆರೋಪ.

ಶಬರಿಕೊಳ್ಳ, ಮೇಗುಂಡೇಶ್ವರ ಕೊಳ್ಳ, ಸಿದ್ದೇಶ್ವರ ಕೊಳ್ಳಗಳನ್ನು ಹೊರತು ಪಡಿಸಿದರೆ ಕೆಲವು ಕೊಳ್ಳಗಳಿಗೆ ಸುಗಮ ಸಂಚಾರಕ್ಕೆ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಭಕ್ತರು ಮತ್ತು ಚಾರಣಿಗರಿಗೆ ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ ಎಂಬುದು ಮುಖ್ಯವಾಗಿದೆ.

ಹೂವಿನ ಕೊಳ್ಳದ ಜಲಪಾತ (ಸಂಗ್ರಹ ಚಿತ್ರ)

ಶಬರಿಕೊಳ್ಳಕ್ಕೆ ರಸ್ತೆ ಇದ್ದರೂ ಅಭಿವೃದ್ಧಿಯಾಗಿಲ್ಲ. ಟೆಂಡರ್‌ ಕರೆದಿರುವ ರಸ್ತೆಯೂ ಪೂರ್ಣಗೊಂಡಿಲ್ಲ. ಮೇಗುಂಡೇಶ್ವರ ಕೊಳ್ಳಕ್ಕೂ ಇದು ಹೊರಾಗಿಲ್ಲ. ಉಳಿದ ಕೊಳ್ಳಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಲು ಪ್ರವಾಸಿಗರು, ಚಾರಣಿಗರು ಚುನಾಯಿತ ಪ್ರತಿನಿಧಿಗಳನ್ನು ಕಂಡಿಲ್ಲವೋ ಅಥವಾ ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿ ಹೊಂದಿಲ್ಲವೋ ಎನ್ನುವುದು ಮಾತ್ರ ಗೌಪ್ಯವಾಗಿದೆ.

ಒಟ್ಟಿನಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ತಾಲ್ಲೂಕಿನ ಕೊಳ್ಳಗಳನ್ನು ಉಳಿಸಿಕೊಳ್ಳಬೇಕು. ಚಾರಣಿಗರಿಗೆ ಅಗತ್ಯ ಸೌಲಭ್ಯಗಳನ್ನು ಪೂರೈಸಿ ಅಭಿವೃದ್ಧಿ ಪಡಿಸಬೇಕು ಎಂಬುದು ಬಹುತೇಕರ ಆಗ್ರಹವಾಗಿದೆ.

72 ಅಡಿ ಎತ್ತರದ ಶಿವನ ಮೂರ್ತಿ

ಪಟ್ಟಣಕ್ಕೆ ಹೊಂದಿಕೊಂಡಿರುವ ಸುಮಾರು 72 ಅಡಿ ಎತ್ತರದ ಶಿವನ ಮೂರ್ತಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಸಾಯಿಬಾಬಾ ಮಂದಿರ ಪ್ರಾಕೃತಿಕ ಸೌಂದರ್ಯ ಮಕ್ಕಳ ಉದ್ಯಾನವನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ನೀರಿನ ಯಾವುದೇ ಮೂಲಗಳಿಲ್ಲ. ಕೊಳವೆ ಬಾವಿಯ ಸಹಾಯದಿಂದ ನೀರು ಪಡೆಯುವ ಶಿವಪ್ರತಿಷ್ಠಾನ ಸೇವಾ ಸಮಿತಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ.

ಕೊಳ್ಳಗಳ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಅರಣ್ಯದಲ್ಲಿರುವ ಪ್ರಾಕೃತಿಕ ಸೊಬಗು ಮರೆಯಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಜಲಪಾತ ಝರಿಗಳು ಪ್ರಕೃತಿ ಸೌಂದರ್ಯ ಉಳಿಸಿಕೊಳ್ಳಬೇಕಿದೆ.
–ಪಾಂಡುರಂಗ ಜಟಗನ್ನವರ ಪರಿಸರವಾದಿ
ತಾಲ್ಲೂಕಿನಲ್ಲಿ ಎಂಟು ಅದ್ಬುತ ಕೊಳ್ಳಗಳಿವೆ. ಚಿಕ್ಕವರಿದ್ದಾಗ ಶಬರಿ ಕೊಳ್ಳ ಬಿಟ್ಟರೆ ಉಳಿದವುಗಳ ಮಾಹಿತಿ ಇರಲಿಲ್ಲ. ರಾಮದುರ್ಗ ತಾಲ್ಲೂಕಿಗೆ ಕೊಡುಗೆಯಾಗಿರುವ ಕೊಳ್ಳಗಳ ಅಭಿವೃದ್ಧಿಯ ಅಗತ್ಯತೆ ಇದೆ.
–ಡಾ.ಪೂರ್ಣಿಮಾ ಗೌರೋಜಿ ಪರಿಸರವಾದಿ
ರಾಮದುರ್ಗ ತಾಲ್ಲೂಕಿನ ಅರಣ್ಯದಲ್ಲಿ ಪ್ರವಾಸಿ ತಾಣಗಳಂತಿರುವ ಕೊಳ್ಳಗಳು ಸಾಕಷ್ಟಿವೆ. ಕೊಳ್ಳಗಳ ಅಭಿವೃದ್ಧಿಗೆ ವಿಶೇಷ ಅನುದಾನ ಇರುವುದಿಲ್ಲ.
–ಭಾಗ್ಯಶ್ರೀ ಮಸಳಿ ವಲಯ ಅರಣ್ಯಾಧಿಕಾರಿ
ಕೊಳ್ಳಗಳು ಝರಿಗಳು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಬಹುದು. ಆದರೆ ರಾಮದುರ್ಗದಂತಹ ಬಯಲು ಸೀಮೆಯಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಕೊಳ್ಳಗಳ (ಪ್ರವಾಸಿ ತಾಣಗಳ) ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ
–ವಿಜಯ ನಾಯಕ ಹೋರಾಟಗಾರ
ರಾಮದುರ್ಗ ತಾಲ್ಲೂಕಿನಲ್ಲಿ ಏಳಕ್ಕೂ ಹೆಚ್ಚಿನ ಪ್ರವಾಸಿ ತಾಣಗಳಂತೆ ಸ್ವಯಂ ನಿರ್ಮಿತ ಕೊಳ್ಳಗಳಿವೆ. ಅವುಗಳನ್ನು ಸಾರ್ವಜನಿಕರ ಉಪಯುಕ್ತತೆಗೆ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆಯಲಾಗುವುದು.
–ಪ್ರಕಾಶ ಹೊಳೆಪ್ಪಗೋಳ ತಹಶೀಲ್ದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.