
ಎಂ.ಕೆ.ಹುಬ್ಬಳ್ಳಿ: ‘ಏಷ್ಯಾದಲ್ಲೇ ಅತ್ಯುತ್ತಮ ಕಾರ್ಖಾನೆ ಎಂದು ಹೆಸರು ಮಾಡಿದ್ದ ಮಲ್ಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ (ರಾಣಿ ಶುಗರ್ಸ್) ಯನ್ನು ಪುನಃ ಹೆಸರಿಗೆ ತಕ್ಕಂತೆ ರಾಣಿಯಂತೆ ಮೆರೆಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕಾರ್ಖಾನೆಯು 55 ವರ್ಷದ ಹಿರಿಯಣ್ಣನ ರೀತಿ ಇದೆ. ನಮ್ಮ ಸಂಪೂರ್ಣ ಪೆನೆಲ್ ಆರಿಸುವ ಮೂಲಕ ರೈತರು ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ವರ್ಷ 4 ಲಕ್ಷ ಟನ್ ಕಬ್ಬು ನುರಿಕೆ ಆಗಬೇಕು. ಮುಂದಿನ ಸಾಲಿನಿಂದ ಕಾರ್ಮಿಕರಿಗೆ ದೀಪಾವಳಿ ಬೋನಸ್ ಕೊಡಲೇಬೇಕು. ಶೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ನೀಡಬೇಕು ಎಂಬ ನಿರ್ಧಾರಗಳು ಇವೆ’ ಎಂದರು.
‘ನಾಲ್ಕು ತಾಲ್ಲೂಕುಗಳ ರೈತರ ಜೀವನಾಡಿಯಾದ ಈ ಕಾರ್ಖಾನೆಗೆ ಪುನಃಶ್ಚೇತನ ನೀಡಿ, ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ನಮ್ಮ ಗುರಿ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಮೊದಲ ಕಬ್ಬು ನುರಿಸುವ ಹಂಗಾಮಿಗೆ ಇಂದು ಪೂಜೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ, ಈಗ ನಿಮಗೆ ಸಿಕ್ಕಿರುವ ಅಧಿಕಾರ ಒಂದು ದೊಡ್ಡ ಜವಾಬ್ದಾರಿ ಎನ್ನುವುದನ್ನು ಮರೆಯದೆ, ಸಾವಿರಾರು ರೈತರು ತಮ್ಮ ಭವಿಷ್ಯವನ್ನು ನಿಮ್ಮ ಕೈಗೆ ಕೊಟ್ಟಿದ್ದಾರೆ ಎನ್ನುವ ಪ್ರಜ್ಞೆಯಿಂದ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು ಎನ್ನುವ ಸೂಚನೆ ಕೊಡುತ್ತಿದ್ದೇನೆ. ನಾನು ಮತ್ತು ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ವಿಠ್ಠಲ ಹಲಗೆಕರ್ ಕಾಲಕಾಲಕ್ಕೆ ಬಂದು ಎಲ್ಲವನ್ನೂ ಗಮನಿಸುತ್ತೇವೆ’ ಎಂದು ಸಚಿವರು ಹೇಳಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಚನ್ನರಾಜ ಹಟ್ಟಿಹೊಳಿ ಅನುಭವ ಹೊಂದಿದ್ದಾರೆ. ಈ ಕಾರ್ಖಾನೆಯನ್ನು ಉತ್ತಮವಾಗಿ ಮುನ್ನಡೆಸುವ ವಿಶ್ವಾಸವಿದೆ. ಎಲ್ಲರೂ ಜೊತೆಯಲ್ಲಿ ಕೂಡಿಕೊಂಡು ಕೆಲಸ ಮಾಡೋಣ’ ಎಂದು ಹೇಳಿದರು.
ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ‘ಎಲ್ಲರ ಸಲಹೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಕಾರ್ಖಾನೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತೇವೆ. ರೈತರು ನಿರಂತರ ಪ್ರೀತಿ ತೋರಿಸುತ್ತ ಬಂದಿದ್ದಾರೆ. ಬೇರೆ ಕಾರ್ಖಾನೆಗಳ ಜೊತೆಯಲ್ಲೇ ಇಲ್ಲೂ ಕಬ್ಬು ನುರಿಸಲು ನಮ್ಮ ಕಾರ್ಖಾನೆ ಸಿದ್ಧವಾಗಿದೆ’ ಎಂದರು.
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕಾದರವಳ್ಳಿ ಸೀಮೀಮಠದ ಪಾಲಾಕ್ಷ ಶಿವಯೋಗಿಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಕಾರ್ಖಾನೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ಕಾಡಾ ಅಧ್ಯಕ್ಷ ಯುವರಾಜ ಕದಂ, ಶಂಕರಗೌಡ ಪಾಟೀಲ, ಬಸವರಾಜ ಸಾಣಿಕೊಪ್ಪ, ಸುರೇಶ ಇಟಗಿ, ಅಡಿವೇಶ ಇಟಗಿ, ಕಾರ್ಖಾನೆಯ ನಿರ್ದೇಶಕರು, ರೈತರು ಮತ್ತು ಕಾರ್ಮಿಕರು ಇದ್ದರು.
ಚನ್ನರಾಜ ಹಟ್ಟಿಹೊಳಿ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಸ್ಥಳೀಯ ಅಧಿದೇವತೆ ಬಂಡೆಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು.

ಉತ್ತಮ ಹಂಗಾಮು ಸಿಕ್ಕರೆ ಬೋನಸ್ ಹಾಗೂ ರಿಯಾಯಿತಿ ದರದಲ್ಲಿ ಸಕ್ಕರೆ ಸಿಗುತ್ತದೆ. 4 ಲಕ್ಷ ಟನ್ ಕ್ರಷಿಂಗ್ ಮಾಡಲೇಬೇಕು ಎಲ್ಲರೂ ಕಬ್ಬು ಕಳಿಸಿ ಸಹಕಾರ ಮಾಡಿಬಾಬಸಾಸಾಹೇಬ ಪಾಟೀಲ ಶಾಸಕ

ಕಾರ್ಮಿಕರು ಹಾಗೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕಾರ್ಮಿಕರ ಮನೆಗಳ ದುರಸ್ತಿ ಮಾಡಲು ಹಣ ಮೀಸಲಿಡುತ್ತೇವೆಚನ್ನರಾಜ ಹಟ್ಟಿಹೊಳಿ ಅಧ್ಯಕ್ಷ ರಾಣಿ ಶುಗರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.