ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ರಾಯಬಾಗದ ಪುಂಗಿತೋಟದ ಸದ್ದಾಂ ಹುಸೇನ ಮೆಹಬೂಬ ಮುಲ್ಲಾ (23) ಹಾಗೂ ಆತನಿಗೆ ಸಹಕರಿಸಿದ ಯುಸೂಫ ನೂರುದ್ದೀನ ಮುಲ್ಲಾ (25), ಆದಮ ಗುಲಾಲಸಾಬ ಹಿಪ್ಪರಗಿಗೆ (23) ತಲಾ 10 ವರ್ಷ ಜೈಲು ಶಿಕ್ಷೆ ಹಾಗೂ ₹ 40,000 ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿ.ನಂಜುಂಡಯ್ಯ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
2016 ಮಾರ್ಚ್ 14ರಂದು ನೊಂದ ಬಾಲಕಿಯ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಅವಳನ್ನು ಚಿಕಿತ್ಸೆಗಾಗಿ ಸದ್ದಾಂಹುಸೇನ ತನ್ನ ಕಾರಿನಲ್ಲಿ ರಾಯಬಾಗ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದ. ವೈದ್ಯರಿಗೆ ತೋರಿಸಿದ ನಂತರ ವಾಪಸ್ ಅದೇ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದ. ರಾಯಬಾಗ ತಾಲ್ಲೂಕು ಕ್ರೀಡಾಂಗಣದ ಬಳಿ ಕಾರು ಕೆಟ್ಟುಹೋಗಿದೆ ಎಂದು ನಿಲ್ಲಿಸಿದ್ದ.
ಸ್ನೇಹಿತರಾದ ಯುಸೂಫ ನೂರುದ್ದೀನ ಮುಲ್ಲಾ ಹಾಗೂ ಗುಲಾಲಸಾಬ ಹಿಪ್ಪರಗಿನನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡ. ಬೈಕ್ ಮೇಲೆ ಬಂದ ಇವರಿಬ್ಬರು. ಬಾಲಕಿಯನ್ನು ಕೈ– ಕಾಲುಗಳನ್ನು ಹಿಡಿದುಕೊಂಡರು. ಸದ್ದಾಂಹುಸೇನ ಅತ್ಯಾಚಾರ ಎಸಗಿದ್ದ. ‘ಈ ಕೃತ್ಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಅಕ್ಕಳನ್ನು ಸುಟ್ಟುಹಾಕುತ್ತೇವೆ’ ಎಂದು ಪ್ರಾಣ ಬೆದರಿಕೆ ಹಾಕಿದ್ದ.
ಹತ್ತು ದಿನಗಳ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖಾಧಿಕಾರಿ ಸಂತೋಷ ಡಿ. ಸತ್ಯನಾಯಿಕ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ವಿಶೇಷ ಸರ್ಕಾರಿ ವಕೀಲ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.