ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ದೇವಸ್ಥಾನ ಸುತ್ತಲಿನ 200 ಮೀಟರ್ ವೃತ್ತಾಕಾರ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧಪಡಿಸಿದ ‘ಮಾಸ್ಟರ್ ಪ್ಲ್ಯಾನ್’ನ ತ್ರಿಡಿ ನೋಟ
ಬೆಳಗಾವಿ: ‘ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಿದ್ಧಪಡಿಸಿದ ‘ಮಾಸ್ಟರ್ ಪ್ಲ್ಯಾನ್’ಗೆ ಅನುಮೋದನೆ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಟೆಂಡರ್ ಕರೆದು, ಎರಡು ವಾರಗಳಲ್ಲಿ ಕೆಲಸ ಶುರು ಮಾಡಲಾಗುವುದು. ಜನರು ವೈಯಕ್ತಿಕ ಲಾಭ ಬದಿಗಿಟ್ಟು ಸಹಕರಿಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಇಲ್ಲಿನ ವಾರ್ತಾ ಭವನದಲ್ಲಿ ಗುರುವಾರ, ಬೆಳಗಾವಿ ಜಿಲ್ಲಾ ಪತ್ರಕರ್ತರ ಸಂಘದೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ‘ಯಲ್ಲಮ್ಮನಗುಡ್ಡಕ್ಕೆ ಪ್ರತಿ ವರ್ಷ 3 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ಇಂಥ ದೇವಸ್ಥಾನದ ಅಭಿವೃದ್ಧಿಗೆ ಇಷ್ಟು ವರ್ಷ ವೇಗವಾಗಿ ನಡೆದಿಲ್ಲ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ₹300 ಕೋಟಿಯಲ್ಲಿ ವೈವಿಧ್ಯಮಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎರಡು ವರ್ಷಗಳ ಒಳಗೆ ಗುಡ್ಡಕ್ಕೆ ಹೊಸ ಕಳೆ ಬರಲಿದೆ’ ಎಂದರು.
ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧಪಡಿಸಿದ ‘ಮಾಸ್ಟರ್ ಪ್ಲ್ಯಾನ್’ನ ತ್ರಿಡಿ ನೋಟ
‘ಗುಡ್ಡದಲ್ಲಿ 1,098 ಎಕರೆ ಜಾಗವಿದೆ. ಇದರಲ್ಲಿ 100 ಎಕರೆ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸ್ಥಿರಾಸ್ತಿ ಇದೆ. ಉಳಿದ ಜಮೀನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿದೆ. ಮೂಲ ದೇವಸ್ಥಾನದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ವೃತ್ತಾಕಾರದ ಪ್ರದೇಶ ಗುರುತಿಸಲಾಗುವುದು. ಅಲ್ಲಿ ಭಕ್ತಿ ಚಟುವಟಿಕೆ ಬಿಟ್ಟರೆ ಬೇರೇನೂ ಮಾಡಲು ಅವಕಾಶ ಇರುವುದಿಲ್ಲ. ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಆ ಪ್ರದೇಶವನ್ನು ವಾಹನ– ಚಕ್ಕಡಿಗಳ ಪಾರ್ಕಿಂಗ್, ಮೇವು ದಾಸೋಹಕ್ಕೆ ಬಳಸಲಾಗುವುದು. ದೇವಿಗೆ ನೈವೇದ್ಯ ಸಿದ್ಧಪಡಿಸುವವರಿಗಾಗಿ ‘ಓಪನ್ ಕಿಚನ್’ಗಳನ್ನೂ ಕಟ್ಟಲಾಗುವುದು’ ಎಂದರು.
‘ತಿರುಪತಿ ಮಾದರಿಯಲ್ಲಿ ಬೃಹತ್ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಿಸಿ, ಅಲ್ಲಿ 16 ಸಭಾಂಗಣ ಕಟ್ಟಲಾಗುವುದು. ಅದರೊಳಗೆ ಊಟ, ಉಪಾಹಾರ, ಶೌಚಾಲಯ, ನೀರು, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗುವುದು. ಹುಣ್ಣಿಮೆಗಳ ಸಂದರ್ಭದಲ್ಲಿ 10ರಿಂದ 15 ಲಕ್ಷ ಜನ ಸೇರುತ್ತಾರೆ. ಸದ್ಯ 50 ಸಾವಿರ ಜನ ಮಾತ್ರ ದರ್ಶನ ಪಡೆಯುವಂಥ ಸ್ಥಿತಿ ಇದೆ. ಕ್ಯೂ ಕಾಂಪ್ಲೆಕ್ಸ್ ಮೂಲಕ ಎಲ್ಲರಿಗೂ ದರ್ಶನ ಒದಗಿಸುವ ವಿಶಿಷ್ಟ ವ್ಯವಸ್ಥೆ ಆಗಲಿದೆ’ ಎಂದೂ ವಿವರಿಸಿದರು.
‘ಧರ್ಮಸ್ಥಳ ಮಾದರಿಯಲ್ಲಿ ದಾಸೋಹ ಭವನ ಕಟ್ಟಲಾಗುವುದು. ಏಕಕಾಲಕ್ಕೆ 5,000 ಜನ ಊಟ ಮಾಡಬಹುದು. ಒಂದೇ ದಿನದಲ್ಲಿ ಲಕ್ಷಾಂತರ ಜನರಿಗೆ ದಾಸೋಹ ಒದಗಿಸಲು ಸಾಧ್ಯವಾಗಲಿದೆ. ಇನ್ನೊಂದೆಡೆ ಬೃಹದ್ದಾದ ‘ಕಮಾಂಡ್ ಸೆಂಟರ್’ ಕಟ್ಟಡ ಇರಲಿದೆ. ಇದರಲ್ಲಿ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ, ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಗಳು, ಸಿಬ್ಬಂದಿ, ಭದ್ರತೆ, ಸಿಸಿಟಿವಿ, ಪಾರ್ಕಿಂಗ್... ಎಲ್ಲವೂ ಒಂದೇ ಸ್ಥಳದಿಂದ ನಿರ್ವಹಣೆ ಆಗಲಿವೆ. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತಲಿವೆ’ ಎಂದು ಮೊಹಮ್ಮದ್ ತಿಳಿಸಿದರು.
‘ರಸ್ತೆ ವಿಸ್ತರಣೆಗೆ ₹30 ಕೋಟಿ‘
‘ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಲ್ಲ ರಸ್ತೆಗಳನ್ನೂ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹30 ಕೋಟಿ ಪ್ರತ್ಯೇಕ ಅನುದಾನವನ್ನು ಸಚಿವ ಸತೀಶ ಜಾರಕಿಹೊಳಿ ಮಂಜೂರು ಮಾಡಿದ್ದಾರೆ’ ಎಂದು ಮೊಹಮ್ಮದ್ ರೋಷನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದೇವಸ್ಥಾಣದಿಂದ 300 ಮೀಟರ್ ದೂರದಲ್ಲಿ ವಾಣಿಜ್ಯ ಕೇಂದ್ರ ಇರಲಿದೆ. ಈಗಾಗಲೇ ಯಾರು ಮಳಿಗೆಗಳನ್ನು ಹೊಂದಿದ್ದಾರೋ ಅವರಿಗೇ ಮೊದಲ ಆದ್ಯತೆ ನೀಡಿ ಮಳಿಗೆ ಕೊಡಲಾಗುವುದು. ಹಂಗಾಮಿ ವರ್ತಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೇ ಪ್ರಾಧಾನ್ಯತೆ ನೀಡಲಾಗುವುದು’ ಎಂದೂ ಹೇಳಿದರು.
‘ಶೌಚಾಲಯ ಅಲ್ಲ; ಗೌರವ ಘಟಕ’
‘ಶುಚಿತ್ವ ಕಾಪಾಡಲು ಸಾಕಷ್ಟು ಸಂಖ್ಯೆಯ ‘ಗೌರವ ಘಟಕ’ಗಳನ್ನು ನಿರ್ಮಿಸಲಾಗುವುದು. ಇವು ಶೌಚಾಲಯಗಳು ಮಾತ್ರವಲ್ಲ; ಸ್ನಾನಕ್ಕೂ, ಅಲಂಕಾರಕ್ಕೂ ಅನುಕೂಲವಾಗುತ್ತವೆ. ಪಾನ್– ಗುಟಕಾ, ಮದ್ಯ ಮಾರಾಟ ನಿಯಂತ್ರಿಸಿ ಸಂಪೂರ್ಣ ಸ್ವಚ್ಛತೆ ಕಾಪಾಡಲಾಗುವುದು. ಪ್ರವಾಸೋದ್ಯಮ ಆಕರ್ಷಣೆಗಾಗಿ ಜೋಗುಳಬಾವಿಯಿಂದ ಗುಡ್ಡದ ಮೇಲಿನ ದೇವಸ್ಥಾನದವರೆಗೆ ‘ರೋಪ್ ವೇ’ ನಿರ್ಮಿಸಲಾಗುವುದು. ಇ– ದರ್ಶನ, ಇ–ಹುಂಡಿಯಂಥ ಯೋಜನೆಗಳೂ ಮುಂದೆ ಬರಲಿವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.