ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ ಎಂಬುವರು ತಮ್ಮ 102 ವರ್ಷದ ತಾಯಿ ಸತ್ಯವ್ವ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು 220 ಕಿ.ಮೀ ದೂರದ ಪಂಢರಾಪುರದ ವಿಠಲನ ದರ್ಶನ ಮಾಡಿಸಿದ್ದಾರೆ.
ಪಂಢರಾಪುರ ವಿಠಲನ ಭಕ್ತರಾದ ಸದಾಶಿವ ಬಾನೆ ಅವರು 15 ವರ್ಷಗಳಿಂದ ದಿಂಡಿಪಾದಯಾತ್ರೆ ಮೂಲಕ ಪಂಢರಾಪುರಕ್ಕೆ ಹೋಗುತ್ತಾರೆ. ಶತಾಯುಷಿ ತಾಯಿಯನ್ನು ಒಮ್ಮೆಯಾದರೂ ಫಂಡರಾಪುರ ದಿಂಡಿ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತು ವಿಠಲನ ದರ್ಶನ ಮಾಡಿಸುವ ಆಸೆ ಹೊಂದಿದ್ದರು. ಭಾರಿ ಮಳೆಯಲ್ಲೂ ಕುಗ್ಗದೇ ಸತತ ಒಂಬತ್ತು ದಿನ ದಿಂಡಿ ಪಾದಯಾತ್ರೆ ಮೂಲಕ, ತಾಯಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ವಿಠಲನ ದರ್ಶನ ಮಾಡಿಸಿದ್ದಾರೆ.
‘ತಾಯಿಯೇ ನಿಜವಾದ ದೇವರು. ಅವರ ಆಸೆ ಈಡೇರಿಸುವುದು ಮಕ್ಕಳ ಕರ್ತವ್ಯ. ಅದಕ್ಕೆ ನಮ್ಮ ಕೆಂಪಟ್ಟಿ ಗ್ರಾಮದಿಂದ ಹೊರಟು ಪಾಂಡುರಂಗ ವಿಠಲನ ದರ್ಶನ ಮಾಡಿಸಿದೆ. ಹೋಗುವಾಗ ವಿಠಲನ ದಯೆಯಿಂದ ಯಾವುದೇ ರೀತಿಯ ಆಯಾಸ, ತೊಂದರೆ ಆಗಲೇ ಇಲ್ಲ’ ಎಂದು ಸದಾಶಿವ ಬಾನೆ ತಿಳಿಸಿದರು.
‘ನನ್ನ ಜನ್ಮ ಸಾರ್ಥಕವಾಯಿತು. ನನ್ನ ಕಿರಿಯ ಮಗ ನನ್ನ ಜೀವನದ ಕೊನೆಯ ಆಸೆ ಈಡೇರಿಸಿದ. ನನ್ನ ಮುಂದಿನ ಜನ್ಮ ಎಂಬುದು ಇದ್ದರೆ, ಮತ್ತೆ ಅವನ ತಾಯಿಯಾಗಿ ಹುಟ್ಟುವ ಆಸೆ’ ಎಂದು ಸತ್ಯವ್ವ ಬಾನೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.