
ಬೆಳಗಾವಿ: ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತೊಂದು ‘ಡಿನ್ನರ್ ಪಾರ್ಟಿ’ ಆಯೋಜನೆ ಮಾಡಿದ ವಿಚಾರ ಗುರುವಾರ ಕೂಡ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್– ಬಿಜೆಪಿ ನಾಯಕರು ಪರಸ್ಪರ ಕಾಲೆಳೆದರು.
‘ಡಿನ್ನರ್ ಪಾರ್ಟಿ’ಗಳ ಮೂಲಕ ಕಾಂಗ್ರೆಸ್ನ ಒಳಜಗಳ ಇನ್ನೂ ಮುಗಿದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.
ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರಿಯಾಗಿ ಚರ್ಚೆ ಆಗುತ್ತಿಲ್ಲ. ನಮ್ಮ ಮಾತುಗಳಿಗೆ ಸರ್ಕಾರ ಗಮನ ಕೊಡುತ್ತಿಲ್ಲ. ಡಿನ್ನರ್ ಪಾರ್ಟಿ, ಇನ್ನರ್ ಪಾಲಿಟಿಕ್ಸ್ನಲ್ಲೇ ಕಾಲ ಕಳೆಯುತ್ತಿದೆ’ ಎಂದರು.
‘ಐದು ವರ್ಷ ನಾನೇ ಸಿ.ಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮತ್ತೊಂದೆಡೆ ಬ್ರೇಕ್ಫಾಸ್ಟ್ಗಳನ್ನು ಮಾಡಿಕೊಂಡು, 15 ದಿನಗಳು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಈಗಲೂ ಅವರ ಕುರ್ಚಿ ಅತಂತ್ರವಾಗಿದೆ’ ಎಂದರು.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ‘ಸತೀಶ ಅವರು ಊಟಕ್ಕೆ ಎಲ್ಲರನ್ನೂ ಕರೆದಿದ್ದಾರೆ. ಮೊನ್ನೆ ದಿನೇಶ ಗುಂಡೂರಾವ್ ಕರೆದಿದ್ದರು. ನಾವು ಆಗಲೂ ಹೋಗಿದ್ದೇವು. ಇದರಲ್ಲಿ ಟೀಕಿಸುವುದೇನಿಲ್ಲ’ ಎಂದರು.
‘ಸತೀಶ ಅವರು ಪರಿಶಿಷ್ಟ ಶಾಸಕರನ್ನು ಮಾತ್ರ ಕರೆದಿಲ್ಲ. ಸಿದ್ದರಾಮಯ್ಯ ಆಪ್ತರು ಮಾತ್ರ ಸೇರಿಲ್ಲ. ಎಲ್ಲರೂ ಸೇರಿದ್ದೇವೆ. ನಮ್ಮ ಕೆಲವು ಶಾಸಕರು ಹಾಡಿ, ಹಾಸ್ಯ ಮಾಡಿ ರಂಜಿಸಿದ್ದಾರೆ. ಒಂದಷ್ಟು ವಿಸ್ಕಿ ಕುಡಿದಿದ್ದೇವೆ, ಮಾಂಸ– ಅನ್ನ ತಿಂದಿದ್ದೇವೆ. ಅದರೊಂದಿಗೆ ಕೆಲವು ರಾಜಕೀಯ ಚರ್ಚೆಯನ್ನೂ ಮಾಡಿದ್ದೇವೆ’ ಎಂದು ಶಾಸಕ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.
ಬುಧವಾರ ನಡೆದ ಡಿನ್ನರ್ ಪಾರ್ಟಿಯಲ್ಲಿ ಸಿ.ಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಕೆ.ಎನ್.ರಾಜಣ್ಣ, ಗಣೇಶ ಹುಕ್ಕೇರಿ, ಬಿ.ಆರ್.ಪಾಟೀಲ, ಆಸಿಫ್ ಸೇಠ್, ವಿಶ್ವಾಸ ವೈದ್ಯ, ಮಹಾಂತೇಶ ಕೌಜಲಗಿ, ಚಳ್ಳಕೆರೆ ಶಾಸಕ ರಘುಮೂರ್ತಿ ಸೇರಿ 20ಕ್ಕೂ ಹೆಚ್ಚು ಶಾಸಕರು ಭಾಗಿಯಾದರು ಎಂದು ಮೂಲಗಳು ಖಚಿತಪಡಿಸಿವೆ.
ಕೇಂದ್ರ ಸರ್ಕಾರದತ್ತ ಪದೇಪದೇ ಬೊಟ್ಟು ಮಾಡಬೇಡಿ. ಏನು ಬಾಕಿ ಇದೆ ಏನು ಬೇಕಿದೆ ಎಂದು ಕುಳಿತು ಚರ್ಚೆ ಮಾಡಿ. ಲವ್ ಲೆಟರ್ ಬರೆಯುವ ಬದಲು ಇಂಥದ್ದೇ ಬೇಕು ಎಂದು ಗಟ್ಟಿಯಾಗಿ ಕೇಳಿಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ವಿಧಾನ ಪರಿಷತ್
‘ಸದನದಲ್ಲಿನ ಹೇಳಿಕೆಗೆ ಈಗಲೂ ಬದ್ಧ’
‘ರಾಜ್ಯದ ಮಹಿಳೆಯರಿಗೆ ನೀಡಿದ ವಚನವನ್ನು ನಮ್ಮ ಸರ್ಕಾರ ಹಾಗೂ ನನ್ನ ಇಲಾಖೆ ಬದ್ಧತೆಯಿಂದ ಪಾಲಿಸಿದೆ. ಗೃಹಲಕ್ಷ್ಮೀ ಹಣ 23 ಕಂತು ಹಾಕಿದ್ದೇವೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯಿಸಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಮಹಿಳೆ ಸ್ವಾಭಿಮಾನದಿಂದ ಜೀವನ ಮಾಡಬೇಕು ಎನ್ನುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೇವೆ. ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೇನೆ’ ಎಂದರು. ‘ಬಿಜೆಪಿಯವರು ಕೇಳಿದ್ದು ಫೆಬ್ರವರಿ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣದ ಬಗ್ಗೆ. ಪ್ರತಿ ತಿಂಗಳು ನನ್ನ ಇಲಾಖೆಯಿಂದ ಹಣಕಾಸು ಇಲಾಖೆಗೆ ಪತ್ರ ಕಳುಹಿಸುತ್ತೇನೆ. ಅಲ್ಲಿಂದ ಬಂದ ಕೂಡಲೇ ನಾನು ಫೈಲ್ ಮುಂದಕ್ಕೆ ಕಳಿಸುತ್ತೇನೆ. ಆ ಎರಡು ತಿಂಗಳು ಹಣ ಬಂದಿಲ್ಲ ಅಂದರೆ ಹಣಕಾಸು ಇಲಾಖೆಯನ್ನು ಹೇಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಬಿಜೆಪಿಯವರು ₹5000 ಕೋಟಿ ಹಣ ಬಿಡುಗೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಬೇಕಿಲ್ಲ. ಹಣಕಾಸು ಇಲಾಖೆಯಿಂದ ಎಷ್ಟು ಬಿಡುಗಡೆ ಆಗಿದೆಯೋ ಅಷ್ಟು ಹಣ ಸಂದಾಯ ಮಾಡಿದ್ದೇವೆ’ ಎಂದೂ ಹೇಳಿದರು. ಇದೇ ವಿಚಾರವಾಗಿ ಟೀಕಿಸಿದ ಛಲವಾದ ನಾರಾಯಣಸ್ವಾಮಿ ‘ಸಚಿವೆ ತಪ್ಪು ಮಾಹಿತಿ ನೀಡಿ ತಾವೇ ಸಿಕ್ಕಿಕೊಂಡಿದ್ದಾರೆ. ಹಣ ಎಲ್ಲಿ ಹೋಗಿದೆ? ಏಕೆ ಕೊಟ್ಟಿಲ್ಲ ಎಂಬ ಬಗ್ಗೆ ಸದನದಲ್ಲಿ ಪಟ್ಟು ಹಿಡಿದು ಪ್ರಶ್ನೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.