ಬೆಳಗಾವಿ: ‘ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರೆತಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಲ್ಲಿ ಹುಟ್ಟಲು ಬಯಸುತ್ತೇನೆ’ ಎಂದು ಖ್ಯಾತ ಹಿನ್ನಲೆ ಗಾಯಕ, ಪದ್ಮಭೂಷಣ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೇಳಿದ್ದರು.
ಇದೇ ವರ್ಷದ ಫೆ.1ರಂದು ಜಿಲ್ಲೆಯ ಗೋಕಾಕದಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ ಕಾಯಕ ಯೋಗಿ ಲಿಂ.ಬಸವ ಸ್ವಾಮೀಜಿ ಅವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-2020 ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ ₹ 1 ಲಕ್ಷ ನಗದು ಒಳಗೊಂಡಿರುವ ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದ್ದರು.
‘ವಿದ್ಯಾರ್ಥಿ ಜೀವನದಲ್ಲಿದ್ದಾಗ, ಎಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಆದರೆ, ವಿಧಿ ನನ್ನನ್ನು ಗಾಯಕನನ್ನಾಗಿ ಬೆಳೆಸಿದೆ. ಭಾರತದಲ್ಲಿ ಇರುವ 15 ಭಾಷೆಗಳಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಬೇರೆಯವರಿಗೂ ಈ ವಿದ್ಯೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆಂಧ್ರದಲ್ಲಿ ಹುಟ್ಟಿ ಬೆಳೆದರೂ ಹಿನ್ನೆಲೆ ಗಾಯಕನಾಗಿ ಹಾಡಿದ 2ನೇ ಹಾಡೇ ಕನ್ನಡದ್ದು. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿವರೆಗೆ ಬಂದಿದೆ. ಕನ್ನಡಿಗರ ಪ್ರೀತಿ ಮರೆಯಲು ಸಾಧ್ಯವಿಲ್ಲ’ ಎಂದು ಮನದುಂಬಿ ನೆನೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.