ಬೆಳಗಾವಿ: ‘ಸೋಲಾರ್ ಪವರ್ ಪ್ಲಾಂಟ್ ನನ್ನದಲ್ಲ. ನನ್ನ ಹೆಸರಿನಲ್ಲಿ ಇದ್ದರೆ ಚಾಮುಂಡೇಶ್ವರಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ಅದನ್ನು ಸರ್ಕಾರದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ನನ್ನ ಮಾಲೀಕತ್ವದ ಹರ್ಷಾ ಶುಗರ್ಸ್ ಕಾರ್ಖಾನೆಯ ವ್ಯವಹಾರದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಕಾರ್ಖಾನೆಗೆ ಸಂಬಂಧಿಸಿದಂತೆ ₹ 120 ಕೋಟಿ ಅವ್ಯವಹಾರವಾಗಿದೆ ಎನ್ನಲಾದ ವಿಚಾರವು ಕೇವಲ ಆರೋಪ ಅಷ್ಟೇ. ಅದಕ್ಕೆ ಯಾವುದೇ ಆಧಾರ ಇಲ್ಲ’ ಎಂದರು.
‘ಕಾರ್ಖಾನೆಗೆ ಸಾಲ ನೀಡುವ ವೇಳೆ ಅಪೆಕ್ಸ್ ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಪರಿಶೀಲಿಸುತ್ತದೆ. ಅದೇ ರೀತಿ ನಮ್ಮ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿರುವುದನ್ನು ಮನವರಿಕೆ ಮಾಡಿಕೊಂಡು ಸಾಲ ನೀಡಿವೆ. ಯಾವುದೇ ಅವ್ಯವಹಾರವಾಗಿಲ್ಲ’ ಎಂದು ಹೇಳಿದರು.
‘ಆದಾಯ ತೆರಿಗೆ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಸೂಕ್ತ ತನಿಖೆ ನಡೆಸುತ್ತವೆ ಎನ್ನುವ ವಿಶ್ವಾಸ ತಮಗಿದೆ. ಕಪೋಲಕಲ್ಪಿತ ಸುದ್ದಿಗಳಿಗೆ ನಾನು ಉತ್ತರಿಸಲು ಹೋಗುವುದಿಲ್ಲ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.