ADVERTISEMENT

ಬೈಲಹೊಂಗಲ: ತಾಯಿಯ ಚಿಕಿತ್ಸೆಗೆ ಹಣ ನೀಡದ ತಂದೆಯನ್ನೇ ಕೊಲೆ ಮಾಡಿದ ಮಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 4:55 IST
Last Updated 7 ಸೆಪ್ಟೆಂಬರ್ 2022, 4:55 IST
   

ಬೈಲಹೊಂಗಲ: ಇಲ್ಲಿನ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಮಂಗಳವಾರ ರಾತ್ರಿ, ತಾಯಿಯ ಚಿಕಿತ್ಸೆಗೆ ಹಣ ನೀಡದ ಕಾರಣ ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ರುದ್ರಪ್ಪ ತಲಳವಾರ (55) ಕೊಲೆಯಾದವರು. ಸಂತೋಷ ರುದ್ರಪ್ಪ ತಳವಾರ (30) ಆರೋಪಿ.

ರುದ್ರಪ್ಪ ಹಾಗೂ ಪತ್ನಿ ಮಹಾದೇವಿ (50) ಮಧ್ಯೆ ರಾತ್ರಿ ಜಗಳ ನಡೆದಿತ್ತು. ಪತ್ನಿ ಗಾಯಗೊಂಡಿದ್ದರು. ಆಗ ಹೊರಗಡೆ ಹೋಗಿದ್ದ ಮಗ ಮನೆಗೆ ಬಂದು ತಂದೆ, ತಾಯಿ ಜಗಳ ಬಿಡಿಸಿ ಗಾಯಗೊಂಡಿದ್ದ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು.

ADVERTISEMENT

ಆಸ್ಪತ್ರೆ ಬಿಲ್ ₹1500 ಆಗಿತ್ತು. ಸಂತೋಷ ತಮ್ಮ ಬಳಿ ಇದ್ದ ₹ 500 ಹಣ ಕೊಟ್ಟು, ಬಾಕಿ ₹1000 ಹಣವನ್ನು ತಂದೆಯ ಕಡೆ ಕೇಳಲು ಮನೆಗೆ ಬಂದಿದ್ದರು. ಆಗ ಮಾತಿಗೆ, ಮಾತು ಬೆಳೆದು ಸಂತೋಷ ತಂದೆಯನ್ನು ಮಚ್ಚಿನಿಂದ ಕಣ್ಣು, ಕುತ್ತಿಗೆಗೆ ಬಲವಾಗಿ ಹೊಡೆದರು. ತೀವ್ರ ರಕ್ತಸ್ತ್ರಾವದಿಂದ ನರಳಿದ ತಂದೆ ಸ್ಥಳದಲ್ಲಿಯೇ ಕೊನೆ ಉಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ರುದ್ರಪ್ಪ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕ, ತಾಯಿ ಮಹಾದೇವಿ ಮಲ್ಲೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ. ಇಬ್ಬರದೂ ಅಂತರ್ಜಾತಿ ಪ್ರೇಮ ವಿವಾಹವಾಗಿತ್ತು. ಇವರಿಗೆ ಪುತ್ರ, ಪುತ್ರಿ ಇದ್ದಾರೆ.

ಪುತ್ರಿಯನ್ನು ನೇಗಿನಹಾಳಕ್ಕೆ ಮದುವೆ ಮಾಡಿ ಕೊಡಲಾಗಿದೆ. ಕೊಲೆ ಆರೋಪಿ ಪುತ್ರನಿಗೂ ಮದುವೆ ಆಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ, ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದರು. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.