ADVERTISEMENT

ಪಿಎಸ್ಐ ಅನುಚಿತ ವರ್ತನೆ: ಠಾಣೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 14:01 IST
Last Updated 26 ಜೂನ್ 2018, 14:01 IST
ಬಿಜೆಪಿ ಕಾರ್ಯಕರ್ತರು ರಾಮದುರ್ಗ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು
ಬಿಜೆಪಿ ಕಾರ್ಯಕರ್ತರು ರಾಮದುರ್ಗ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು   

ರಾಮದುರ್ಗ: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಮಹಾದೇವಪ್ಪ ಯಾದವಾಡ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಪಿಎಸ್‍ಐ ಸುನೀಲಕುಮಾರ ನಾಯಕ ವರ್ತನೆಗೆ ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ರಾಮದುರ್ಗ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಎರಡು ಗಂಟೆ ಧರಣಿ ನಡೆಸಿದರು.

‘ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಳಗಾವಿ ರಸ್ತೆಯಲ್ಲಿ ರಾಮದುರ್ಗ ಪೊಲೀಸ್ ಠಾಣೆಯ ಪಿಎಸ್‍ಐ ಸುನೀಲಕುಮಾರ ನಾಯಕ ಮೋಟಾರು ವಾಹನ ಕಾಯ್ದೆಯಡಿ ದ್ವಿಚಕ್ರ ವಾಹನ ಮತ್ತು ಇತರೆ ವಾಹನಗಳಿಗೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಿದ್ದರು. ಈ ಕುರಿತು ಕೆಲವರು ಶಾಸಕರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದಾಗ ಮಾತನಾಡಲು ಹೇಳಿದ್ದಾರೆ. ಆವಾಗ ಪಿಎಸ್‍ಐ ಯಾವ ಎಂಎಲ್‍ಎ? ಎಂದು ಏಕವಚನದಲ್ಲಿ ಮಾತನಾಡಿದ್ದಾರೆ’ ಎನ್ನಲಾಗಿದೆ. ಅದಕ್ಕೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ.

‘ಅದೇ ಮಾರ್ಗದಲ್ಲಿ ಹೊರಟಿದ್ದ ಶಾಸಕರು ಪಿಎಸ್‍ಐಗೆ ಸಮಜಾಯಿಸಿ ಹೇಳಲು ಹೋದಾಗಲೂ ಅವರೊಂದಿಗೆ ಸೌಜನ್ಯದಿಂದ ವರ್ತಿಸಲಿಲ್ಲ. ಮಾತಿಗೆ ಮಾತು ಬೆಳೆಸಿ ಕೊರಳ ಪಟ್ಟಿ ಹಿಡಿಯಲು ಮುಂದಾಗಿದ್ದಾರೆ’ ಎಂದು ಠಾಣೆ ಎದುರಿಗೆ ಧರಣಿ ನಿರತ ಬಿಜೆಪಿ ಕಾರ್ಯಕರ್ತರು ದೂರಿದರು.

ADVERTISEMENT

ಅಷೊತ್ತಿಗೆ ಠಾಣೆಗೆ ಆಗಮಿಸಿದ ಸಿಪಿಐ ಶ್ರೀನಿವಾಸ ಹಾಂಡ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡೆಸಲು ಯತ್ನಿಸಿದರೂ ಕಾರ್ಯಕರ್ತರು ಪಿಎಸ್‍ಐ ವರ್ಗಾವಣೆ ಪಟ್ಟು ಹಿಡಿದು ಕುಳಿತರು. ಪಿಎಸ್‍ಐ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆಯೂ ಕಾರ್ಯಕರ್ತರು ಮತ್ತು ಪಿಎಸ್‍ಐ ಸುನೀಲಕುಮಾರ ನಾಯಕ ಜೊತೆಗೆ ಮಾತಿನ ಘರ್ಷಣೆ ನಡೆಯಿತು. ಅಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುಮಾರು ಎರಡು ಗಂಟೆ ನಂತರ ಬೈಲಹೊಂಗಲದಿಂದ ಆಗಮಿಸಿದ ಡಿವೈಎಸ್‍ಪಿ ಜೆ.ಎಂ. ಕರುಣಾಕರಶೆಟ್ಟಿ ಧರಣಿ ನಿರತರಲ್ಲಿಯ ಪ್ರಮುಖರನ್ನು ಕರೆದು ಮಾತುಕತೆ ನಡೆಸಿದರು. ‘ಯಾವುದೇ ಧ್ಯಾನದಲ್ಲಿ ಪಿಎಸ್‍ಐ ನಾಯಕ ಚುನಾಯಿತ ಪ್ರತಿನಿಧಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದ ನಂತರ ಅಲ್ಲಿಂದ ಜನ ತೆರಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಮಲ್ಲಣ್ಣ ಯಾದವಾಡ, ರಾಜು ಬೀಳಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.