ಹಂದಿಗುಂದ: ಸಮೀಪದ ಸವಸುದ್ದಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬಾರದೆ ಇರುವುದರಿಂದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
‘ಬುಧವಾರ ಸಾರಿಗೆ ಬಸ್ಗಳನ್ನು ನಿಲ್ಲಿಸಿ ಹಳೆಯ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸವಸುದ್ದಿ, ಖನದಾಳ, ಇಟನಾಳ, ಬೆಂಡವಾಡ ಮುಂತಾದ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆಂದು ಮುಗಳಖೋಡ, ಹಾರೂಗೇರಿ ಕಾಲೇಜುಗಳಿಗೆ ತೆರಳಲು ಇದೊಂದೆ ಮಾರ್ಗವಾಗಿದೆ. ಕೇವಲ ಎರಡು ಬಸ್ಗಳು ಮಾತ್ರ ಸಂಚರಿಸುತ್ತವೆ. ಅವೂ ನಿಗದಿತ ಸಮಯಕ್ಕೆ ಬರುವುದಿಲ್ಲ. ಇದರಿಂದ ನಮಗೆ ತೀವ್ರ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.
‘ಹೆಚ್ಚುವರಿ ಬಸ್ಗಳ ಕಾರ್ಯಾಚರಣೆ ಆರಂಭಿಸಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ರಾಯಬಾಗ ಹಾಗೂ ಚಿಕ್ಕೋಡಿ ಸಾರಿಗೆ ಘಟಕಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ನಿಗಮದ ಚಿಕ್ಕೋಡಿ ಘಟಕದ ಸಿ.ಕೆ. ಮುಂಜಾವ್, ಬಸ್ಗಳು ನಿಗದಿತ ಸಮಯಕ್ಕೆ ಬರುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸನಗೌಡ ಪಾಟೀಲ, ವೀರಶೈವ ಲಿಂಗಾಯತ ಸಮಾಜ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಮಣ ದುಂಡಗಿ, ಶ್ರೀಮಂತಗೌಡ ಪಾಟೀಲ, ಅಜ್ಜಪ್ಪಗೌಡ ಪಾಟೀಲ, ಅನಿಲ ದುಂಡಗಿ, ಬಸವರಾಜ ಹಂದಿಗುಂದ, ಅಜಿತ ನಾವಿ, ಲಕ್ಷ್ಮಣಗೌಡ ಪಾಟೀಲ, ಚೇತನ ಪಾಟೀಲ, ನವೀನಗೌಡ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.