ADVERTISEMENT

ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಬಳಕೆ ಅವಶ್ಯ: ಡಾ.ಸತೀಶಕುಮಾರ ಹೊಸಮನಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:05 IST
Last Updated 5 ಜನವರಿ 2021, 12:05 IST
ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯಕ್ಕೆ ಈಚೆಗೆ ಭೇಟಿ ನೀಡಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅವರನ್ನು ಸಿಬ್ಬಂದಿ ಸನ್ಮಾನಿಸಿದರು
ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯಕ್ಕೆ ಈಚೆಗೆ ಭೇಟಿ ನೀಡಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅವರನ್ನು ಸಿಬ್ಬಂದಿ ಸನ್ಮಾನಿಸಿದರು   

ಬೆಳಗಾವಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಬಳಕೆ ಅತ್ಯವಶ್ಯವಾಗಿದೆ. ಆ ಮೂಲಕ ಯಶಸ್ಸು ಗಳಿಸಬಹುದಾಗಿದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಹೇಳಿದರು.

ನಗರ ಕೇಂದ್ರ ಗ್ರಂಥಾಲಯದಲ್ಲಿ ಈಚೆಗೆ ನಡೆದ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

‌‘ಸಾರ್ವಜನಿಕ ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲೆಯ 13,400 ಮಂದಿ ಸೇರಿ6 ಲಕ್ಷಕ್ಕೂ ಅಧಿಕ ಓದುಗರು ನೋಂದಾಯಿಸಿದ್ದಾರೆ. ಈ ಡಿಜಿಟಲ್ ವೇದಿಕೆಯನ್ನು ವೆಬ್‌ ಹಾಗೂ ಆ್ಯಪ್‌ ಆಧಾರಿತವಾಗಿ ಬಳಸಿಕೊಳ್ಳಬಹುದಾಗಿದೆ. ವೆಬ್‌ನಲ್ಲಿ ಲಭ್ಯವಿರುವ ಎಲ್ಲ ವಿಷಯಗಳು ಆ್ಯಪ್‌ನಲ್ಲೂ ಲಭ್ಯವಾಗುತ್ತವೆ. ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಶಾಲಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೇಶದ ಮತ್ತು ಅಂತರರಾಷ್ಟ್ರೀಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಈ ಡಿಜಿಟಲ್ ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ’ ಎಂದರು.

ನಿವೃತ್ತ ಉಪ ನಿರ್ದೇಶಕ ಡಿ.ಎ. ಕುಲಕರ್ಣಿ ಇದ್ದರು. ಸ್ಥಳದಲ್ಲೇ ಡಿಜಿಟಲ್ ಗ್ರಂಥಾಲಯಕ್ಕೆ ನೋಂದಣಿ ಮಾಡಿಸಿದವರನ್ನು ಸನ್ಮಾನಿಸಲಾಯಿತು.

ಉಪ ನಿರ್ದೇಶಕ ರಾಮಯ್ಯ ಮಾತನಾಡಿದರು. ಎ.ಎ. ಕಾಂಬಳೆ ಸ್ವಾಗತಿಸಿದರು. ಇ.ಎನ್. ಅಂಬೇಕರ ನಿರೂಪಿಸಿದರು. ನೀಲಮ್ಮ ಆರ್. ಪಟ್ಟೇದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.