ಬೆಳಗಾವಿ: ‘ಭಾರತೀಯ ಯುವಜನತೆಯ ಸ್ಫೂರ್ತಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದರು ಎಂದೂ ಸಂಕುಚಿತ ದೃಷ್ಟಿಯವರಾಗಿರಲಿಲ್ಲ. ರಾಮಕೃಷ್ಣ ಪರಮಹಂಸರ ಜೀವಶಿವಾ ಸಿದ್ಧಾಂತದಿಂದ ಪ್ರೇರಿತರಾಗಿದ್ದರಲ್ಲದೆ ಸರ್ವ ಧರ್ಮದ ತತ್ವಗಳನ್ನೂ ಅಧ್ಯಯನ ಮಾಡಿದ್ದರು’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದರ ಜೊತೆ ಮಿಡಿವ ಯುವಜನತೆ’ ಎನ್ನುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೇದ, ವೇದಾಂತ, ಬೈಬಲ್, ಕುರಾನ್ ಮತ್ತು ಬುದ್ಧ ತತ್ವಗಳೆಲ್ಲವನ್ನೂ ತೀಕ್ಷ್ಣ ದೃಷ್ಟಿಯಿಂದ ಅಧ್ಯಯನ ಮಾಡಿದ್ದ ಅವರು ನಮ್ಮ ಮಾತೃ ಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡರ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ- ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ ಎಂದು ಪ್ರತಿಪಾದಿಸಿ ಸೌಹಾರ್ದದ ಸಂಕೇತವಾಗಿದ್ದಾರೆ. ಹಿಂದೆಂದಿಗಿಂತಲೂ ಇಂದು ದೇಶಕ್ಕೆ ಕೋಮು ಸೌಹಾರ್ದದ ಅಗತ್ಯವಿದ್ದು, ವಿವೇಕಾನಂದರನ್ನು ಇಂತಹ ಜನಪರ ನೆಲೆಗಳಲ್ಲಿ ಅರ್ಥೈಸಬೇಕು’ ಎಂದು ಅಭಿಪ್ರಾಯಪಟ್ಟರು.
ಅಡಿವೆಪ್ಪ ಇಟಗಿ, ಮನೋಹರ ಕಾಂಬಳೆ, ಆಕಾಶ ಬೇವಿನಕಟ್ಟಿ, ಸೈದು ಹಿರೇಮನಿ, ಸುನಿಲ್ ನಾಟೀಕಾರ್, ಗೌತಮ ಮಾಳಗೆ, ವಿಠ್ಠಲ ಹರಿಜನ, ವಿದ್ಯಾಶ್ರೀ ಕಾಂಬಳೆ ಸಂವಾದದಲ್ಲಿ ಪ್ರತಿಕ್ರಿಯಿಸಿದರು. ಜ್ಞಾನದೇವ ಕಾಂಬಳೆ, ಶಂಕರ ಬಾಗೇವಾಡಿ, ಅತೀಶ ಢಾಲೆ, ಶಿವಾನಂದ ನಾಯಕ, ವಿಶಾಲ ಮೇತ್ರಿ, ರಾಘವೇಂದ್ರ ಬನಹಟ್ಟಿ, ಸೂರಜ ಗಾಣಿಗೇರ, ರಾಜು ಕಾಂಬಳೆ, ಬಸವರಾಜ ಸುಲ್ತಾನಪುರೆ ಪಾಲ್ಗೊಂಡಿದ್ದರು.
ಕಾವೇರಿ ಬುಕ್ಯಾಳಕರ, ಸುಧಾ ಕೊಟಬಾಗಿ, ಅನಿತಾ ಬನಪ್ಪಗೋಳ, ಗೋಪಿಕಾ ಹೇರಗೆ ಕ್ರಾಂತಿಗೀತೆಗಳನ್ನು ಹಾಡಿದರು.
ಸಂತೋಷ ನಾಯಕ ಸ್ವಾಗತಿಸಿದರು. ದೇಮಣ್ಣ ಸೊಗಲದ ವಂದಿಸಿದರು. ಬಾಲಕೃಷ್ಣ ನಾಯಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.