
ಸವದತ್ತಿ: ‘ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ಶೇ ನೂರರಷ್ಟು ಫಲಿತಾಂಶ ಗಳಿಸಲು ಮೊದಲ ಆದ್ಯತೆ ನೀಡಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹೇಳಿದರು.
ಇಲ್ಲಿನ ಬಿ.ಬಿ. ಮಮದಾಪೂರ ಬಾಲಿಕೆಯರ ಪ್ರೌಢಶಾಲೆ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
‘ಡಿಸೆಂಬರ್ ಅಂತ್ಯಕ್ಕೆ ಕಡ್ಡಾಯವಾಗಿ ಪಠ್ಯಕ್ರಮ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪರೀಕ್ಷಾ ಮಂಡಳಿಯ ಅಧ್ಯಕ್ಷ, ಅಪರ ಆಯುಕ್ತರು ತಯಾರಿಸಿದ ಪರೀಕ್ಷೆ ಕುರಿತಾದ ವಿಡಿಯೊಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಿ ಮಾರ್ಗಸೂಚಿ ಪಾಲಿಸಬೇಕು’ ಎಂದು ತಿಳಿಸಿದರು.
‘ಸದ್ಯದಿಂದಲೇ ಮಿಷನ್ 50, 40 ಮತ್ತು 35 ಮಾದರಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಿತ್ಯ ಓದಿಸುವ ಮತ್ತು ಬರೆಸುವ ಕಾರ್ಯ ನಿರಂತರವಾಗಿರಲಿ. ವಿದ್ಯಾರ್ಥಿಗಳ ಚಟುವಟಿಕೆ ಆಧಾರಿತವಾಗಿ ಆಂತರಿಕ ಅಂಕ, ದಾಖಲೆ ಪರಿಶೀಲಿಸಿ ನೀಡಬೇಕು. ನೋಂದಾಯಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಕ್ತಾಯದವರೆಗೂ ಶಾಲೆಯಲ್ಲಿ ಇರಿಸುವ ಕಾರ್ಯವಾಗಲಿ. ಸರಾಸರಿ ಹಾಗೂ ಜಾಣ ವಿದ್ಯಾರ್ಥಿಗಳಿಗೆ ಪಕ್ಕದ ಶಾಲೆಗಳನ್ನು ಕ್ಲಬ್ ಮಾಡಿ ಅಭಿಪ್ರೇರಣಾ ಕಾರ್ಯಾಗಾರ ನಡೆಸಬೇಕು’ ಎಂದು ಸೂಚಿಸಿದರು.
ಡಯಟ್ ಪ್ರಾಚಾರ್ಯ ಅಶೋಕ ಸಿಂದಗಿ ಮಾತನಾಡಿ, ‘ಕಳೆದ ಸಾಲಿನಲ್ಲಿ ಸವದತ್ತಿ ತಾಲ್ಲೂಕು ಜಿಲ್ಲೆಗೆ ಮೂರನೇ ಸ್ಥಾನ ಪಡೆದಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ’ ಎಂದರು.
ಬಿಇಒ ಎ.ಎ. ಖಾಜಿ, ಅಕ್ಷರ ದಾಸೋಹ ಎ.ಡಿ ಮೈತ್ರಾದೇವಿ ವಸ್ತ್ರದ, ಸಲೀಂ ನದಾಫ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ. ರಾಠೋಡ, ಮಾಧ್ಯಮಿಕ ಸಂಘದ ಅಧ್ಯಕ್ಷ ಬಸವರಾಜ ಆಲದಕಟ್ಟಿ, ಶ್ರೀಕಾಂತ ಯರಡ್ಡಿ, ಸುಧೀರ್ ವಾಘೇರಿ, ಅರ್ಜುನ ಕಾಮಣ್ಣವರ, ಬಿ.ವಿ. ಚಿಚಗಂಡಿ, ಆರ್.ಎಫ್. ಮಾಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.