ADVERTISEMENT

ಚೀನಾ ಎಂಎನ್‌ಸಿಗಳ ಹೂಡಿಕೆಗೆ ಆಹ್ವಾನ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 11 ಮೇ 2020, 15:27 IST
Last Updated 11 ಮೇ 2020, 15:27 IST
   

ಬೆಳಗಾವಿ: ‘ಚೀನಾದಿಂದ ಹೊರಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು (ಎಂಎನ್‌ಸಿ) ರಾಜ್ಯಕ್ಕೆ ಬರಲು ಆಹ್ವಾನ ನೀಡಲಾಗುವುದು. ಅವರ ಕೈಗಾರಿಕೆಗೆ ಬೇಕಾದ ನಿವೇಶನ, ರಿಯಾಯಿತಿ ಮೊದಲಾದ ಸೌಲಭ್ಯ ನೀಡಲು ಸಿದ್ಧವಿದ್ದೇವೆ. ಅನುಮತಿ ಕೊಡುವ ಪ್ರಕ್ರಿಯೆ ಸರಳಗೊಳಿಸಲಾಗುವುದು’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸೃಷ್ಟಿಸಿರುವ ತಲ್ಲಣದಿಂದಾಗಿ ಸಾವಿರಾರು ಎಂಎನ್‌ಸಿಗಳು ಚೀನಾದಿಂದ ಹೊರಬಂದು ಬೇರೆ ಬೇರೆ ದೇಶಗಳಲ್ಲಿ ಹೂಡಿಕೆಗೆ ಮುಂದಾಗಿವೆ. ಕೈಗಾರಿಕೆಯಲ್ಲಿ ಯಾವಾಗಲೂ ಮುಂದಿರುವ ಕರ್ನಾಟಕ ಈ ಪರಿಸ್ಥಿತಿಯ ಲಾಭ ಪಡೆಯಲು ಅವಕಾಶವಿದೆ. ಹೀಗಾಗಿ, ಇಲಾಖೆಯಿಂದ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಬೇಕು. ಅದರಲ್ಲಿ ನಮ್ಮ ಅಧಿಕಾರಿಗಳು ಹಾಗೂ ಬೇರೆ ಬೇರೆ ದೇಶದ ಅಧಿಕೃತ ರಾಯಭಾರಿಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಎಂದು ಕೋರಿದ್ದೇನೆ. ಹೂಡಿಕೆದಾರರನ್ನು ಆಕರ್ಷಿಸಲು ಪ್ರಕ್ರಿಯೆ ಆರಂಭಿಸಿದ್ದೇವೆ’ ಎಂದರು.

‘ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಕಾರ ಬೇಗ ಮತ್ತು ಸುಲಭವಾಗಿ ಅನುಮತಿ ನೀಡಲಾಗುವುದು. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಕೈಗಾರಿಕೆಗಳಿಗೆ ವಿನಾಯಿತಿ ಕೊಡಲಾಗುವುದು. ಅದರ ಲಾಭ ಹೊಸ ಕೈಗಾರಿಕೆಗೆ ದೊರೆಯುವಂತೆ ಮಾಡಲಾಗುವುದು ಮತ್ತು ಇರುವ ಕೈಗಾರಿಕೆ ಮುಂದುವರಿಸಿಕೊಂಡು ಹೋಗಲು ಬೇಕಾದ ಅನುಕೂಲ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.