ಸವದತ್ತಿ (ಬೆಳಗಾವಿ): ತನ್ನ ಹಳೆಯ ವಿದ್ಯಾರ್ಥಿನಿಯ ಜೊತೆಗೆ ತೆಗಿಸಿಕೊಂಡಿದ್ದ ‘ವೈಯಕ್ತಿಕ’ ಫೋಟೊವೊಂದನ್ನು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ ಶಿಕ್ಷಕರೊಬ್ಬರನ್ನು ಸವದತ್ತಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಪ್ರೌಢಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಬಿರಾದಾರ ಬಂಧಿತ ಆರೋಪಿ. ಯುವತಿಗೆ ಬೇರೊಬ್ಬ ವರನೊಂದಿಗೆ ಮದುವೆ ನಿಗದಿಯಾಗಿತ್ತು. ಆದರೆ, ತನ್ನ ವಿದ್ಯಾರ್ಥಿನಿ ಆದಾಗಿನಿಂದಲೂ ಶಿಕ್ಷಕ ಆಕೆಯನ್ನು ಪ್ರೀತಿಸುತ್ತಿದ್ದ. ಮದುವೆ ಮುರಿಯುವ ಉದ್ದೇಶದಿಂದ ತಮ್ಮಿಬ್ಬರ ‘ಸಲುಗೆ’ಯ ಚಿತ್ರಗಳನ್ನು ಮಂಗಳವಾರ ಸ್ಟೇಟಸ್ನಲ್ಲಿ ಹಾಕಿದ್ದ.
ಇದರಿಂದ ಕೋಪಗೊಂಡ ಗ್ರಾಮಸ್ಥರು ಬುಧವಾರ ಶಾಲೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದರು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಬಂದು ಶಿಕ್ಷಕನನ್ನು ಬಂಧಿಸಿದರು.
‘ತನ್ನ ಹಳೆಯ ವಿದ್ಯಾರ್ಥಿಯೊಬ್ಬರನ್ನು ಮದುವೆಯಾಗುವುದಾಗಿ ಶಿಕ್ಷಕ ನಂಬಿಸಿದ್ದ. ಇಬ್ಬರ ಸಲುಗೆಯ ಚಿತ್ರ, ವಿಡಿಯೊಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಸದ್ಯ ವಿದ್ಯಾರ್ಥಿನಿ ಅಂತಿಮ ಪದವಿ ಓದುತ್ತಿದ್ದಾಳೆ. ಮನೆಯವರು ಬುದ್ಧಿವಾದ ಹೇಳಿದ ಮೇಲೆ ವಿದ್ಯಾರ್ಥಿನಿ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಲು ಒಪ್ಪಿದ್ದಳು. ಇದರಿಂದ ಕೋಪಗೊಂಡ ಮಹೇಶ, ತಮ್ಮಿಬ್ಬರ ‘ವೈಯಕ್ತಿಕ’ ಚಿತ್ರವನ್ನು ಬಹಿರಂಗ ಮಾಡಿದ್ದಾನೆ. ಫೋಟೊದಲ್ಲಿ ತನ್ನ ಮುಖವನ್ನು ಕತ್ತರಿಸಿ, ವಿದ್ಯಾರ್ಥಿನಿ ಮಾತ್ರ ಕಾಣಿಸುವಂತೆ ಮಾಡಿದ್ದ. ವಿಷಯ ಗೊತ್ತಾಗಿ ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮಹೇಶ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಬೈರವಾಡ ಗ್ರಾಮದ ನಿವಾಸಿ. ಈ ಬಗ್ಗೆ ಸವದತ್ತಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.