ADVERTISEMENT

ಆಧುನಿಕ ತಂತ್ರಜ್ಞಾನ ಸದ್ಭಳಕೆಯಾಗಲಿ: ಲೀಲಾದೇವಿ

ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬದಲ್ಲಿ ಲೀಲಾದೇವಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:07 IST
Last Updated 15 ಫೆಬ್ರುವರಿ 2021, 16:07 IST
ಬೆಳಗಾವಿಯ ಜೆಎನ್‌ಎಂಸಿ ಜೀರಗೆ ಸಭಾಂಗಣದಲ್ಲಿ ಸೋಮವಾರ ನಡೆದ ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಜಯಶೀಲಾ ಬ್ಯಾಕೋಡ ಮತ್ತು ಡಾ.ಭಾರತಿ ಮಠದ ಸಂ‍‍‍ಪಾದಿಸಿದ ‘ಮಹಿಳಾ-ಸಂಗಮ’ ಕೃತಿಯನ್ನು ಬಿಡುಗಡೆ ಮಾಡಲಾಯಿತು
ಬೆಳಗಾವಿಯ ಜೆಎನ್‌ಎಂಸಿ ಜೀರಗೆ ಸಭಾಂಗಣದಲ್ಲಿ ಸೋಮವಾರ ನಡೆದ ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಜಯಶೀಲಾ ಬ್ಯಾಕೋಡ ಮತ್ತು ಡಾ.ಭಾರತಿ ಮಠದ ಸಂ‍‍‍ಪಾದಿಸಿದ ‘ಮಹಿಳಾ-ಸಂಗಮ’ ಕೃತಿಯನ್ನು ಬಿಡುಗಡೆ ಮಾಡಲಾಯಿತು   

ಬೆಳಗಾವಿ: ‘ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಸದ್ಭಳಕೆ ಮಾಡಿಕೊಂಡು ಸುಂದರ ಜೀವನ ಕಟ್ಟಿಕೊಳ್ಳಬೇಕೆ ಹೊರತು ದುಶ್ಚಟಗಳಿಗೆ ಬಲಿ ಆಗಬಾರದು’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಕಿವಿಮಾತು ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಜೀರಗೆ ಸಭಾಂಗಣದಲ್ಲಿ ಇಲ್ಲಿನ ಲಿಂಗಾಯತ ಮಹಿಳಾ ಸಮಾಜದಿಂದ ಆಯೋಜಿಸಿದ್ದ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಬಳಕೆ ಮಿತಿಮೀರಿದೆ. ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ಗಳಿಗೆ ಅಂಟಿಕೊಂಡು ಪುಸ್ತಕ ಓದುವುದನ್ನು ಬಿಟ್ಟಿದ್ದಾರೆ. ಮೊಬೈಲ್ ಆನ್‌ಲೈನ್‌ ಫೋನ್‌ ಆನ್‌ಲೈನ್‌ ಶಿಕ್ಷಣಕ್ಕೆ ಮತ್ತು ಅಗತ್ಯಕ್ಕೋಸ್ಕರ ಬಳಕೆಯಾಗಬೇಕು. ಆದರೆ, ಮೊಬೈಲ್ ಫೋನ್‌ ಗೀಳಿನಿಂದ ನಮ್ಮ ಸಂಸ್ಕೃತಿ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಮುದ್ರಣ ಹಂತದಲ್ಲಿದೆ:

‘ಲೋವಿಡ್ ಲಾಕ್‌ಡೌನ್ ಸಮಯದಲ್ಲಿ ಜೀವನಚರಿತ್ರೆ ಬರೆದಿದ್ದೇನೆ. ಅದು ನನ್ನ 28ನೇ ಪುಸ್ತಕವಾಗಿದೆ. ಈಗ ಮುದ್ರಣದ ಹಂತದಲ್ಲಿದೆ’ ಎಂದು ತಿಳಿಸಿದರು.

‘ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ನಾಮಕರಣಕ್ಕೆ ಹೋರಾಟ ಮಾಡಿದ್ದವು. ಅದಕ್ಕೆ ಯಶಸ್ಸು ಸಿಕ್ಕಿತು. ಆದರೆ, ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲ್ವೆಗೆ ‘ಅಕ್ಕ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡುವಂತೆ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರಿಗೆ ಮನವಿ ಮಾಡಿದ್ದೆ. ಆದರೆ, ಆಗಲಿಲ್ಲ. ಅದೊಂದು ಆಸೆ ಉಳಿದುಕೊಂಡಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ಮಹಿಳಾ ಕಾರ್ಯಪಡೆ ಮಾಜಿ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ‘ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಮ್ಮ ನಡೆ-ನುಡಿ ಸರಿ ಇದ್ದರೆ ಜನರು ಗೌರವಿಸುತ್ತಾರೆ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ನಬಾರ್ಡ್ ಯೋಜನೆಯಲ್ಲಿ ಹಣ ಪಡೆದು ವಿಮೆ ಮಾಡಿಸಿಕೊಡಬೇಕು. ಅವರ ಈ ಕೆಲಸವಾದಂದು ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗುತ್ತದೆ’ ಎಂದು ಸಲಹೆ ನೀಡಿದರು.

ಕೃತಿ ಬಿಡುಗಡೆ:

ಜಯಶೀಲಾ ಬ್ಯಾಕೋಡ ಮತ್ತು ಡಾ.ಭಾರತಿ ಮಠದ ಅವರು ಸಂ‍‍‍ಪಾದಿಸಿದ ‘ಮಹಿಳಾ-ಸಂಗಮ’ ಕೃತಿ ಬಿಡುಗಡೆ ಮಾಡಲಾಯಿತು. ಈ ಲೇಖಕಿಯರಿಗೆ ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು.

ಪ್ರತಿಭಾ ಕಳ್ಳಿಮಠ ಮತ್ತು ಸಂಡಿಗರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಮಾತೆ ವಾಗ್ದೇವಿ ತಾಯಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಲಿಂಗಾಯತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶೈಲಜಾ ಭಿಂಗೆ, ಪದಾಧಿಕಾರಿಗಳಾದ ಶೈಲಜಾ ಪಾಟೀಲ, ಜ್ಯೋತಿ ಬದಾಮಿ, ಆಶಾ ಪಾಟೀಲ ಇದ್ದರು.

ಸುನಂದಾ ಎಮ್ಮಿ ನಿರೂಪಿಸಿದರು. ಅನುರಾಧಾ ಬಾಗಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.