ಅಥಣಿ: ‘ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಇದು ಸರಿಯಾದ ಸಮಯ ಕೇಂದ್ರ ಸರ್ಕಾರ ಉಗ್ರಗಾಮಿಗಳನ್ನು ಮಟ್ಟ ಹಾಕುವಲ್ಲಿ ತೆಗೆದುಕೊಳ್ಳುವ ಎಲ್ಲ ದಿಟ್ಟ ನಿರ್ಧಾರಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದು 27 ಜನ ಪ್ರವಾಸಿಗರನ್ನು ಹತ್ಯೆ ಮಾಡಿರುವ ದುಷ್ಕೃತ್ಯವನ್ನು ಖಂಡಿಸುತ್ತೇನೆ ಎಂದರು.
‘ನಾನು ಕೂಡ ಕಳೆದ ಆರು ತಿಂಗಳ ಹಿಂದೆ ಜಮ್ಮು ಕಾಶ್ಮೀರದ ಅನೇಕ ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟು ಬಂದಿದ್ದೇನೆ. ಅದೊಂದು ಭೂಲೋಕದ ಸ್ವರ್ಗವಿದ್ದಂತೆ. ಈ ದುಷ್ಕೃತ್ಯದಿಂದ ಮತ್ತೆ ಅಲ್ಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಅಲ್ಲದೆ ಈ ಘಟನೆ ಇಡೀ ಭಾರತೀಯರ ನೋವಿಗೆ ಕಾರಣವಾಗಿದೆ’ ಎಂದರು.
‘ಅಕ್ರಮವಾಗಿ ಭಾರತದಲ್ಲಿ ವಲಸಿರುವ ಪಾಕಿಸ್ತಾನಿಗಳನ್ನು, ವಿಸಾ ಪಡೆದುಕೊಂಡು ಬಂದಿರುವ ಜನರ ವಿಸಾ ರದ್ದುಪಡಿಸಿ ಅವರನ್ನು ಭಾರತದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ರಾಜ್ಯ ತಾಂತ್ರಿಕ 5 ನಿರ್ಧಾರಗಳು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಒಳಿತಲ್ಲ, ರಾಜ್ಯ ಹಾಗೂ ಕೇಂದ್ರದ ನಾಯಕರು ಒಗ್ಗಟ್ಟಿನಿಂದ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾದ್ಯಕ್ಷೆ ಭುವನೇಶ್ವರಿ ಬಿರಪ್ಪಾ ಯಕ್ಕಂಚಿ, ಸದಸ್ಯರಾದ ರಾಜಶೇಖರ ಗುಡೋಡಗಿ, ಮಲ್ಲಿಕಾರ್ಜುನ ಬುಟಾಳಿ, ಪ್ರಮೋದ ಬಿಳ್ಳೂರ, ರಮೇಶ ಪವಾರ , ಸಯ್ಯದಾಮೀನ ಗದ್ಯಾಳ, ದತ್ತಾ ವಾಸ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.