ಬೆಳಗಾವಿ: ‘ಬೆಳಗಾವಿ ಲೋಕಾಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ಗೆ ಇಬ್ಬರ ಹೆಸರು ಅಂತಿಮವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಇಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೊದಲು ಮೂರು ಹೆಸರುಗಳನ್ನು ಸೂಚಿಸಲಾಗಿತ್ತು. ಅದರಲ್ಲಿ ಇಬ್ಬರು ಹೆಸರು ಅಂತಿಮವಾಗಿದೆ’ ಎಂದರು. ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.
‘ನನ್ನ ಹೆಸರಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
ಪಕ್ಷದ ಚಿಹ್ನೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಧ್ಯಕ್ಷರು ಸಮಿತಿ ರಚಿಸಿದ್ದಾರೆ. ಡಿ.31ರಂದು ಬೆಂಗಳೂರಿನಲ್ಲಿ ಈ ವಿಚಾರವಾಗಿ ಸಭೆ ಇದೆ. ಅಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು’ ಎಂದರು.
‘ಪಾಲಿಕೆ ಎದುರು ಕನ್ನಡ ಭಾವುಟ ಹಾರಿಸಿರುವ ಬಗ್ಗೆ ಜಿಲ್ಲಾಡಳಿತವೇ ಸೂಕ್ತ ನಿರ್ಧಾರ ಮಾಡಬೇಕು. ಅನವಶ್ಯ ಸಮಸ್ಯೆ ಹುಟ್ಟು ಹಾಕದೆ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.
‘ಉಪ ಸಭಾಪತಿ ಧರ್ಮೇಗೌಡ ಅವರು ಈ ರೀತಿ ನಿರ್ಧಾರಕ್ಕೆ ಕೈ ಹಾಕಬಾರದಿತ್ತು. ಆತ್ಮಹತ್ಯೆ ಪ್ರಕರಣವನ್ನು ವಿಧಾನಪರಿಷತ್ನಲ್ಲಿ ನಡೆದ ಗಲಾಟೆಗೆ ಜೋಡಿಸಬೇಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಜನ ನಾಯಕರು ಹೀಗೆ ಮಾಡಿದರೆ ಜನಸಾಮಾನ್ಯರ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.