ADVERTISEMENT

ಬೆಳಗಾವಿ ಮೃಗಾಲಯ ತಲುಪಿದ 2 ಹುಲಿಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:23 IST
Last Updated 18 ಮಾರ್ಚ್ 2021, 16:23 IST

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿ ಸಮೀಪದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಮೈಸೂರು ಮೃಗಾಲಯದಿಂದ ಎರಡು ಹುಲಿಗಳನ್ನು ಗುರುವಾರ ತರಲಾಗಿದೆ.

‘ಎರಡೂ ಗಂಡು ಹುಲಿಗಳನ್ನು ವಾಹನದಲ್ಲಿ ಸುರಕ್ಷಿತವಾಗಿ ಇಲ್ಲಿಗೆ ತರಲಾಗಿದೆ. ಅವು ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದವಾಗಿವೆ. ಮೈಸೂರು ಮೃಗಾಲಯದಲ್ಲಿ ಅವು ಇದ್ದವು. ಕೆಲವು ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಅವುಗಳನ್ನು ಇರಿಸಲಾಗುವುದು. ಹೊಸ ಸ್ಥಳಕ್ಕೆ ಹೊಂದಿಕೊಂಡ ಬಳಿಕ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. 8–10 ದಿನಗಳಲ್ಲಿ ಚಿರತೆಗಳನ್ನು ಕೂಡ ತರಿಸಲಾಗುವುದು’ ಎಂದು ಬೆಳಗಾವಿ ವಲಯದ ಸಿಸಿಎಫ್‌ ಬಸವರಾಜ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಮೂರು ಸಿಂಹಗಳನ್ನು ತರಲಾಗಿದೆ. ಅವುಗಳಲ್ಲಿ ಒಂದನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಇನ್ನೆರಡನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಇದರೊಂದಿಗೆ ಮೃಗಾಲಯವು ಮತ್ತಷ್ಟು ಪ್ರವಾಸಿಗರು ಹಾಗೂ ಸಂದರ್ಶಕರನ್ನು ಆಕರ್ಷಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.