ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ
–––––
ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲ ನಡೆದನಾ ಸುಂಕಕಂಜಿ
ಕಳವೆಯೆಲ್ಲ ಹೋಗಿ ಬರಿ ಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ
ಮಾನವನ ಜೀವನ ತುಂಬಾ ಸೂಕ್ಷ್ಮವಾದುದು. ಆತನ ಬದುಕಿನಲ್ಲಿ ನಿಷ್ಠೆಯ ಸೇವೆ, ಪ್ರಾಮಾಣಿಕತೆ, ತ್ಯಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿಯು ಹರಿದ ಗೋಣಿ ಚಿಲದಲ್ಲಿ ಭತ್ತವನ್ನು ತುಂಬಿಟ್ಟಿದ್ದ. ಭತ್ತವನ್ನು ಹೊಲದಿಂದ ಹಗಲಿನಲ್ಲಿ ಮನೆಗೆ ಸಾಗಿಸಿದರೆ ತೆರಿಗೆಯವರು ಸುಂಕ ವಿಧಿಸಬಹುದು ಎಂಬ ಭಯದಿಂದ ರಾತ್ರಿಯಲ್ಲಿ ಭತ್ತವನ್ನು ತನ್ನ ಮನೆಗೆ ತೆಗೆದುಕೊಂಡು ಹೊರಟಿದ್ದ. ಮನೆಯನ್ನು ತಲುಪುವಷ್ಟರಲ್ಲಿ ಭತ್ತವೆಲ್ಲ ಮಾರ್ಗ ಮಧ್ಯದಲ್ಲೆ ಬಿದ್ದು ಗೋಣಿ ಚೀಲವಷ್ಟೆ ಉಳಿದಿತ್ತು. ಹಾಗೆಯೇ, ವ್ಯಕ್ತಿಯು ಭಗವಂತನಲ್ಲಿ ನಿಸ್ವಾರ್ಥ ಶ್ರದ್ಧೆಯನ್ನಿಟ್ಟರೆ ಮಾತ್ರ ಒಳಿತಾಗುತ್ತದೆ. ಮೋಸ–ವಂಚನೆಯ ಬದುಕನ್ನು ಹೊರಗೆ ಸಾಗಿಸಿ, ಒಳಗಡೆ ಭಗವಂತನಿಗೆ ಭಕ್ತಿಯನ್ನು ಸಲ್ಲಿಸಿದರೆ ಯಾವ ಪ್ರತಿಫಲವೂ ದೊರೆಯುವುದಿಲ್ಲ ಎನ್ನುವುದು ಈ ವಚನದ ಸಾರವಾಗಿದೆ. ಇದರಂತೆ ನಾವೆಲ್ಲರೂ ನಡೆದುಕೊಳ್ಳೋಣ. ನಿಸ್ವಾರ್ಥ ಭಕ್ತಿಯಿಂದ ದೇವರ ಕೃಪೆಗೆ ಪಾತ್ರವಾಗುವ ಮೂಲಕ ಒಳಿತೆನೆಡೆಗೆ ಸಾಗೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.