ADVERTISEMENT

₹3 ಕೋಟಿ ವೆಚ್ಚದಲ್ಲಿ ಗ್ರಾಮ ಅಭಿವೃದ್ಧಿ: ಸಚಿವೆ ಹೆಬ್ಬಾಳಕರ

ಮಾವಿನಕಟ್ಟಿ ಲಕ್ಷ್ಮೀದೇವಿ ಜಾತ್ರೆಗೆ ಪೂರ್ವ ಸಿದ್ಧತೆ, ರಥ ನಿರ್ಮಾಣಕ್ಕೆ ಚಾಲನೆ ನೀಡಿದ ಸಚಿವೆ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:08 IST
Last Updated 3 ಅಕ್ಟೋಬರ್ 2025, 3:08 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ಮಹಾಲಕ್ಷ್ಮೀ ರಥ ನಿರ್ಮಾಣ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬುಧವಾರ ಪೂಜೆ ನೆರವೇರಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ಮಹಾಲಕ್ಷ್ಮೀ ರಥ ನಿರ್ಮಾಣ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬುಧವಾರ ಪೂಜೆ ನೆರವೇರಿಸಿದರು   

ಬೆಳಗಾವಿ: ‘ಮುಂದಿನ ವರ್ಷ ನಡೆಯಲಿರುವ ಮಾವಿನಕಟ್ಟಿ ಗ್ರಾಮದ ಜಾತ್ರೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಳ್ಳಲಾಗುವುದು. ₹3 ಕೋಟಿ ವೆಚ್ಚದಲ್ಲಿ ಗ್ರಾಮದ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ಮುಂದಿನ ವರ್ಷ ಜರುಗಲಿರುವ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾಮಗಾರಿಗೆ ಬುಧವಾರ ಪೂಜೆ ನೆರವೇರಿಸಿ ಮಾತನಾಡಿ ಅವರು, ‘ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಅಚರಿಸಲಾಗುವುದು. ಗ್ರಾಮವನ್ನು ಚೆನ್ನಾಗಿ ಇಡಲಿ, ಗ್ರಾಮ ಅಭಿವೃದ್ಧಿಯಾಗಲಿ ಎಂದು ಬೇಡಿಕೊಳ್ಳುವ ಸಲುವಾಗಿಯೇ ಹಿಂದಿನಿಂದಲೂ ಜಾತ್ರೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದು ನಮ್ಮ ಹಿಂದೂ ಸಂಪ್ರದಾಯ ಕೂಡ. 2026ರಲ್ಲಿ ನಡೆಯಲಿರುವ ಜಾತ್ರೆಗೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದೆ. ರಥ ಓಡಾಡುವ ಊರ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಗ್ರಾಮದ ಮಗಳಾಗಿ ಜಾತ್ರಾ ಮಹೋತ್ಸವದ ಜವಾಬ್ದಾರಿ ವಹಿಸಿಕೊಳ್ಳುವೆ’ ಎಂದರು.

‘ಜಿಲ್ಲಾಡಳಿತ, ತಾಲ್ಲೂಕು ಆಡಳಿತ‌ ಜಾತ್ರಾ ಮಹೋತ್ಸವದ ಬಗ್ಗೆ ನಿಗಾವಹಿಸಲಿದ್ದು, ಈ ವೇಳೆ ಪೊಲೀಸ್ ಇಲಾಖೆ, ಇಂಧನ‌ ಇಲಾಖೆ, ಹೆಸ್ಕಾಂ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸಾರಿಗೆ‌ ಇಲಾಖೆಗಳು ಕೂಡ ತಮ್ಮ ವ್ಯಾಪ್ತಿಯ ಜವಾಬ್ದಾರಿಯನ್ನು ನಿಭಾಯಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

‘ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಜಾತ್ರಾ ಮಹೋತ್ಸವದ ವೇಳೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ 10 ಟ್ಯಾಂಕರ್ ನೀಡಲಾಗುವುದು. ‌ಈ ಜಾತ್ರೆ ಕೇವಲ ಗ್ರಾಮಕ್ಕಷ್ಟೇ ಮೀಸಲಲ್ಲ. ಇಡೀ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸೇರಿದ್ದು, ಎಲ್ಲರೂ ಸೇರಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ಆಚರಿಸೋಣ’ ಎಂದೂ ಸಚಿವೆ ಕರೆ ನೀಡಿದರು.

ರುದ್ರಮನಿ ದೇವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮ್ರತಾ ಜಾಧವ್, ಮುಖಂಡರಾದ ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಬಸವಣ್ಣಿ ಮಲ್ಲಣ್ಣವರ, ಬಸನಗೌಡ ಪಾಟೀಲ, ಇಂದ್ರಸಿಂಗ್ ಜಾಧವ್, ಸಚಿನ್ ಜಾಧವ್, ಕಸ್ತೂರಿ ಮಲ್ಲಣ್ಣವರ, ಕಲ್ಲವ್ವ ಹಿರೇಹೊಳಿ, ಸದಾಶಿವ ತಾನಸಿ, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

‘ಮಹಿಳೆಯರೇ ಸಂಸ್ಕೃತಿಯ ರಾಯಭಾರಿಗಳು’

ಬೆಳಗಾವಿ: ‘ವೈಶಿಷ್ಟ್ಯಪೂರ್ಣವಾಗಿ ಹಬ್ಬಗಳ ಆಚರಣೆಯ ಮೂಲಕ ನಮ್ಮ ಮಹಿಳೆಯರು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಹಾಗಾಗಿಯೇ ಮಹಿಳೆಯರು ಸಂಸ್ಕೃತಿಯ ರಾಯಭಾರಿಗಳು’ ಎಂದು ಸಚಿವೆ ಹೇಳಿದರು. ನವರಾತ್ರಿ ಅಂಗವಾಗಿ ಸುಳೇಭಾವಿ ಗ್ರಾಮದ ಶಾಕಾಂಬರಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಪಾರಾಯಣ ಮತ್ತು ದೇವಿಯ ವಿಶೇಷತೆ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಎಲ್ಲ ಸಂಪ್ರದಾಯಗಳನ್ನು ಪಾಲಿಸಿ ಪ್ರತಿಯೊಂದು ಹಬ್ಬಗಳನ್ನು  ಆಚರಿಸುವವರು ಮಹಿಳೆಯರು. ಮಹಿಳೆಯರಿಂದಾಗಿಯೇ ಸಂಸ್ಕೃತಿ ಉಳಿದು ಬೆಳೆಯುತ್ತಿದೆ’ ಎಂದರು. ಪ್ರವಚನ ಬಾಬುರಾವ್ ಮಹಾರಾಜ ದತ್ತಾ ಬಂಡಿಗಣಿ ಶಂಕರಗೌಡ ಪಾಟೀಲ ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.