
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಹಿರೇನಂದಿಹಳ್ಳಿಯ ಕಲ್ಮೇಶ ಶಂಕೆರಪ್ಪ ಕೋಟಿ ಅವರ ಕೊಲೆ ಆರೋಪಿಗಳಾದ ಮಹೇಶ ಅಂಬಣ್ಣವರ, ಮುದಕಪ್ಪ ಕೋಳೆಕರ, ಮೃತನ ಪುತ್ರ ಕಿರಣ ಹಾಗೂ ಪತ್ನಿ ಕಸ್ತೂರಿ
ಚನ್ನಮ್ಮನ ಕಿತ್ತೂರು: ಆಸ್ತಿಗಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಬಿಸಾಕಿದ ಪತ್ನಿ, ಪುತ್ರ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಹಿರೇನಂದಿಹಳ್ಳಿಯಲ್ಲಿ ಈಚೆಗೆ ದೊರೆತ ಅಪರಿಚಿತ ಶವದ ಸುತ್ತಲಿನ ಅಪರಾಧವನ್ನು ಭೇದಿಸುವಯಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಶಂಕೆರಪ್ಪ ಕೋಟಿ (50) ಕೊಲೆಯಾದವರು. ಕಲ್ಮೇಶ ಅವರ ಪತ್ನಿ ಕಸ್ತೂರಿ, ಪುತ್ರ ಕಿರಣ ಹಾಗೂ ಇದೇ ಗ್ರಾಮದ ಮಹೇಶ ಮಡಿವಾಳಪ್ಪ ಅಂಬಣ್ಣವರ ಮತ್ತು ಮುದಕಪ್ಪ ಪದ್ಮರಾಜ ಕೋಳೆಕರ ಕೊಲೆ ಆರೋಪಿಗಳು. ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಬುಧವಾರ ಮಾಹಿತಿ ನೀಡಿದರು.
ಮೃತನ ಹೆಸರಿನಲ್ಲಿದ್ದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅವರ ಪತ್ನಿ ಹಾಗೂ ಪುತ್ರ ಸೇರಿ ಕೊಲೆ ಸಂಚು ರೂಪಿಸಿದ್ದರು. ಇದಕ್ಕೆ ಇನ್ನಿಬ್ಬರು ಸಹಾಯ ಮಾಡಿದ್ದರು. ಮರ್ಮಾಂಗ ಕತ್ತರಿಸಿ ಕೊಲೆ ಮಾಡಿ ದೂರದ ಹೊಲದಲ್ಲಿ ಎಸೆದಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ತನಿಖಾ ತಂಡದ ನೇತೃತ್ವ ವಹಿಇದ್ದ ಕಿತ್ತೂರ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಗಂಗೋಳ, ಜಿ.ಜಿ. ಹಂಪನ್ನವರ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.