ತೆಲಸಂಗ: ‘ಬರದ ಭೂಮಿಗೆ ನೀರು ಹರಿಸುವ ಕೆಲಸ ಮಾಡಲು ನಾನು ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಯೋಜನೆ ಮಾಡಿಕೊಂಡಿದ್ದೇವೆ. ಅಥಣಿ ತಾಲ್ಲೂಕಿನ ಪೂರ್ವ ಭಾಗದ ನೀರಾವರಿ ವಂಚಿತ ಗ್ರಾಮದ ರೈತರು ಯಾವುದೇ ಭಯ ಪಡುವ ಅಗತ್ಯವಿಲ್ಲ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಸಮೀಪದ ಬನದ ಮಲ್ಲಿಕಾರ್ಜುನ ದೇವಸ್ಥಾನದ ವಮನಸ್ ತೋಟದಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಮಿನಿ ಬಾಂದಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಬರ ಬೆಂಬಿಡದೆ ಕಾಡುತ್ತಿದೆ. ಇದರಿಂದ ಜನರಿಗೆ ಮುಕ್ತಿ ಕೊಡಲು ತಯಾರಿಯಲ್ಲಿದ್ದೇವೆ. ಕಷ್ಟಪಟ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಬಿಟ್ಟು ಬೇರಾವುದಕ್ಕೂ ತಲೆಕಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ, ವೈಯಕ್ತಿಕ ಕೆಲಸಗಳಿಗಿಂತ ಸಾರ್ವಜನಿಕ ಕೆಲಸಗಳಿಗೆ ಹೆಚ್ಚೆಚ್ಚು ಒತ್ತು ಕೊಡುವುದನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ನಾನು ರಾಜಕೀಯಕ್ಕೆ ಬಂದಿದ್ದು ಅಧಿಕಾರ ಅನುಭವಿಸಲು ಅಲ್ಲ. ಜನ ಸೇವೆ ಮಾಡಲು ಬಂದಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ಜನರ ಹಿತಕ್ಕೆ ಕೈ ಜೋಡಿಸಬೇಕು’ ಎಂದರು.
ಸಣ್ಣ ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಮಾಕಾಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.