
ವಂಚನೆ
ಬೆಳಗಾವಿ: ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಹಾಗೂ ವಿದೇಶಕ್ಕೆ ಹೋಗುವ ಅವಕಾಶ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ಬಗ್ಗೆ ಬೆಳಗಾವಿ ಸೈಬರ್ ಠಾಣೆ ಪೊಲೀಸರು ಮೂವರ ವಿರುದ್ಧ ಎರಡು ಪ್ರಕರಣಗಳು ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಚನ್ನಮ್ಮನಗರದ ಮೇಘಾ ಮಾರಡೊಳಕ್ ಅವರು ‘ವರ್ಕ್ ಫ್ರಮ್ ಹೋಮ್’ ಕೆಲಸಕ್ಕೆ ಸರ್ಕಾರದಿಂದ ಸಾಲ ಕೊಡಿಸುವುದಾಗಿ, ಉದ್ಯಮಬಾಗದ ಕರ್ನಾಟಕ ಬ್ಯಾಂಕಿನಲ್ಲಿ ಭವಾನಿನಗರದ ಮಾನಸಿ ಚೌವಾಣ್, ಹರಿಶ್ಚಂದ್ರ ದಿವಟೆ ಎಂಬುವರ ಹೆಸರಲ್ಲಿ ಖಾತೆ ಮಾಡಿಸಿದ್ದಾರೆ. ಬಳಿಕ ಅವರಿಂದ ಪಾಸ್ಬುಕ್ ಮಾಹಿತಿ ಪಡೆದು, ಮೋಸದಿಂದ ಸಂಪಾದಿಸಿದ್ದ ಹಣವನ್ನು ಈ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ದೂರಲಾಗಿದೆ.
ಇದೇ ರೀತಿ ನೇತಾಜಿ ಗಲ್ಲಿ ಲಕ್ಷ್ಮಣ ದೇಸಾಯಿ, ಮಹಾರಾಷ್ಟ್ರದ ಸುಮಿತ್ ಶಿಂಧೆ ಎಂಬರು ನಾಲ್ವರಿಗೆ ವಂಚಿಸಿದ್ದಾರೆ. ಪ್ರಥಮೇಶ ದೇಸಾಯಿ, ಮಯೂರ ಇಂಲೆ, ಕಿರಣ ದೇಸಾಯಿ, ಅನಿಲ್ ಪಾಟೀಲ ಎಂಬುವವರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯಮಬಾಗ ಕೆನರಾ ಬ್ಯಾಂಕ್ನಲ್ಲಿ ಖಾತೆ ಮಾಡಿಸಿದ್ದಾರೆ. ನಂತರ ಅವರಿಂದ ಪಾಸ್ಬುಕ್ ಮತ್ತು ಎಟಿಎಂ ಪಡೆದು ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.